ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ ಇಂದಿಗೂ ಕೊಟ್ಯಾಂತರ ಹುಡುಗರ ಕನಸಿನ ರಾಣಿಯಾಗಿರುವ ನಟಿ ರಮ್ಯಾ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ರಾಜಕೀಯ ಹಾಗೂ ಚಿತ್ರರಂಗ ಎರಡರಿಂದಲೂ ದೂರವಾಗಿರುವ ನಟಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ರೆಡಿಯಾಗಿದ್ದಾರೆ. ಈ ಮಧ್ಯೆ ತಮ್ಮ ಜೀವನದ ಹಲವು ವಿಚಾರಗಳ ಬಗ್ಗೆ ರಮ್ಯಾ ಮುಕ್ತವಾಗಿ ಮಾತನಾಡಿದ್ದಾರೆ.
ನಟಿ ಶುಭ್ರಾ ಅಯ್ಯಪ್ಪ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ರಮ್ಯಾ ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ”ಚಿಕ್ಕವಳಿದ್ದಾಗ ನಾನು ಹೆಚ್ಚು ಮಾತನಾಡುತ್ತಿದ್ದೆ. ಅಮ್ಮ ತುಂಬಾ ಪ್ರೀತಿ ತೋರಿಸುತ್ತಿದ್ದರು. ನಾನು ಆಗ ಊಟಿಯಲ್ಲಿದ್ದೇ. ನನಗೆ ಅಮ್ಮ ಮಾತ್ರ ಇದ್ದದ್ದು, ನಾನು ಚಿಕ್ಕವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡೆ. ಬೋರ್ಡಿಂಗ್ ಸ್ಕೂಲ್ನಲ್ಲಿ ಓದುವಾಗ ಅಪ್ಪನಿಲ್ಲದೇ ಖಾಲಿ ಅನ್ನಿಸುತ್ತಿತ್ತು. ನನಗೆ ಇದ್ದದ್ದು ಸಿಂಗಲ್ ಪೇರೆಂಟ್. ಎಲ್ಲರು ಅವರಪ್ಪನ ಬಗ್ಗೆ ಹೇಳುತಿದ್ದರು. ಆಗ ನಾನು ಅಮ್ಮನ ಹೆಸರು ಹೇಳಿತ್ತಿದ್ದೆ. ನನಗೆ ಸರ್ನೇಮ್ ಇರಲಿಲ್ಲ. ನಾನು ಭಿನ್ನವಾಗಿ ಕಾಣಿಸುತ್ತಿದ್ದೆ ಎಂದು ನಟಿ ರಮ್ಯಾ ಹೇಳಿಕೊಂಡಿದ್ದಾರೆ.
ಚಿಕ್ಕವಳಿದ್ದಾಗ ನಾನು ತುಂಬಾ ಮಾತುಗಾರ್ತಿ. ದೊಡ್ಡವಳಾದ ಮೇಲೆ ಇದಕ್ಕೆ ತದ್ವಿರುದ್ಧವಾದೆ. ಅಪ್ಪನಿಲ್ಲದೇ ಖಾಲಿತನ ಅನುಭವಿಸಿದ ನಾನು ಸೈಲೆಂಟ್ ಆದೆ. ಆ ಕಾರಣಕ್ಕೆ ನಾನು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಾತನಾಡಿದರೆ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳಬೇಕಾಗುತ್ತದೆ. ಸಿನಿಮಾಗೆ ಬಂದ ಮೇಲೆ ನಾನು ಅಂತರ್ಮುಖಿ ಆದೆ. ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ.