ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಗುಣಾತ್ಮಕ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದಾನಿಗಳ ಸಹಾಯ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದ್ದು, ಸಮುದಾಯದ ಸಹಭಾಗಿತ್ವದಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟಪ್ಪನವರ ಹೇಳಿದರು.
ಸೋಮುವಾರ ಗದಗ ಶಹರ ರಂಗನವಾಡಿಯ ಸರ್ಕಾರಿ ಶಾಲೆ ನಂ.11ರಲ್ಲಿ ಶಿಕ್ಷಣ ಪ್ರೇಮಿಗಳಾದ ರಾಜಣ್ಣ ಗುಡಿಮನಿ ಅವರು ಶಾಲಾ ಮಕ್ಕಳಿಗೆ ಕೊಡಮಾಡಿದ ಟೈ-ಬೆಲ್ಟ್ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳತ್ತ ಸಮುದಾಯವು ಬಂದು ಮಕ್ಕಳಿಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಕಲಿಕೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಬರುವುದು ಹಾಗೂ ಮೌಲ್ಯಗಳ ಮಹತ್ವತೆಯನ್ನು ಮಕ್ಕಳಲ್ಲಿ ನಾವು ತುಂಬಬೇಕಾಗಿದೆ ಎಂದರು.
ಗದಗ ಶಹರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚುತ್ತಿರುವುದು ಹರ್ಷ ತಂದಿದೆ. ಸಮುದಾಯದ ಸಹಭಾಗಿತ್ವವು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪುಷ್ಠಿ ನೀಡುತ್ತಿದೆ ಎಂದರು.
ಸುಜಾತಾ ಗುಡಿಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರಾಗಿದ್ದು, ಅವರ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸುವುದು ನಮ್ಮ ಕರ್ತವ್ಯ ಎಂದರು.
ಶಿಕ್ಷಣ ಸಂಯೋಜಕರಾದ ಮುರಳಿ ಸೊಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು, ಉಳಿದ ಶಾಲೆಗಳ ಮಕ್ಕಳಂತೆ ನಮ್ಮ ಶಾಲೆಯ ಮಕ್ಕಳು ಬೆಳೆಯಬೇಕೆಂಬ ಸದಾಶಯ ನಮ್ಮದು. ದಾನಿಗಳು ಮುಂದೆ ಬಂದು ಮಕ್ಕಳಲ್ಲಿ ಶಿಸ್ತು ಮೂಡಿಸಲು ಟೈ-ಬೆಲ್ಟ್ ನೀಡುವ ಮೂಲಕ ಸಹಾಯ ಸಲ್ಲಿಸಿದ್ದು ಅಭಿನಂದನೀಯ ಎಂದರು.
ಶಿಕ್ಷಕಿ ರೇಣುಕಾ ಹೊಸಮನಿ ಹಾಗೂ ಮಂಜುಳಾ ಕೊಳ್ಳಿಯವರ ಪ್ರಾರ್ಥಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಸ್ವಾಗತಿಸಿದರು. ಬಿ.ಆರ್.ಪಿ ಶ್ಯಾಮ ಲಾಂಡೆ ನಿರೂಪಿಸಿದರು. ಸಿ.ಆರ್.ಪಿ ಕೆ.ಎ. ಜಲಗೇರಿ ಪರಿಚಯಿಸಿದರು. ಮುಖ್ಯೋಪಾಧ್ಯಾಯೆ ಭಾರತಿ ಕುಲಕರ್ಣಿ ವಂದಿಸಿದರು.