ವಿಜಯಸಾಕ್ಷಿ ಸುದ್ದಿ, ಗದಗ: ವಿಕೃತ ಮನಸ್ಸಿನ ಹಂತಕನೊಬ್ಬನ ಕ್ರೂರ ಕೃತ್ಯ ಮಣ್ಣಲ್ಲಿ ಮಣ್ಣಾಗಿಬಿಡುವ ಹಂತದಲ್ಲಿತ್ತು. ಆದರೆ, ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಆರು ತಿಂಗಳ ನಂತರ ಕೊಲೆಯೊಂದರ ರಹಸ್ಯ ಬಯಲಾಗಿದೆ. ಸಾಕ್ಷಿ ನಾಶ ಮಾಡಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಬಚಾವಾಗುತ್ತಿದ್ದ ಹಂತಕನ ಕೈಗಳಿಗೆ ಕೊನೆಗೂ ಕೋಳ ಬಿದ್ದಿದೆ.
ಪ್ರಕರಣವೇನು?: ಗದಗ ತಾಲೂಕಿನ ನಾರಾಯಣಪೂರ ಗ್ರಾಮದ ಮಧುಶ್ರೀ ಅಂಗಡಿ ಎಂಬ ಯುವತಿ ಅದೇ ಗ್ರಾಮದ ಸತೀಶ್ ಹಿರೇಮಠ ಎಂಬುವನೊಂದಿಗೆ ಪ್ರೇಮದ ಬಲೆಯಲ್ಲಿ ಸಿಲುಕಿದ್ದಳು. ಐದಾರು ವರ್ಷ ಇಬ್ಬರೂ ಪರಸ್ಪರ ಪ್ರೀತಿಸಿದ್ದರು ಕೂಡ. ಆದರೆ, ಮಧುಶ್ರೀ ಕುಟುಂಬಸ್ಥರಿಗೆ ಈ ಪ್ರೀತಿ ಪ್ರೇಮದ ವಿಷಯ ಗೊತ್ತಾದಾಗ, ಗದಗ ನಗರದ ಸಂಬಂಧಿಕರ ಮನೆಯಲ್ಲಿ ಮಧುಶ್ರೀಯನ್ನು ಬಿಟ್ಟಿದ್ದರು.
ಪ್ರಿಯತಮೆಯ ಉಸಿರು ನಿಲ್ಲಿಸಿದ: 2024ರ ಡಿಸೆಂಬರ್ 16 ರಂದು ಪ್ರೇಯಸಿ ಮಧುಶ್ರೀಯನ್ನು ಕರೆದುಕೊಂಡು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದ ತಮ್ಮ ಜಮೀನಿಗೆ ಬಂದಿದ್ದ. ಆಗ ಮಧುಶ್ರೀ ಮದುವೆಯಾಗು ಎಂದು ಹಠ ಹಿಡಿದಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿ, ಜಗಳ ವಿಕೋಪಕ್ಕೆ ತಿರುಗಿತ್ತು. ರೊಚ್ಚಿಗೆದ್ದ ಸತೀಶ್ ಹಿರೇಮಠ ಮಧುಶ್ರೀ ಧರಿಸಿದ್ ವೇಲ್ನಿಂದ ಆಕೆಯ ಕುತ್ತಿಗೆಗೆ ಬಿಗಿದು ಉಸಿರು ನಿಲ್ಲಿಸಿಬಿಟ್ಟಿದ್ದ. ತನ್ನ ಜಮೀನಿನಲ್ಲಿ ಮಧುಶ್ರೀಯನ್ನು ಕೊಂದು ಪಕ್ಕದ ಹಳ್ಳದಲ್ಲಿ ಹೂತುಹಾಕಿದ್ದ.
ದಾಖಲಾಯ್ತು ಮಿಸ್ಸಿಂಗ್ ಕೇಸ್: ಇದಾದ ಬಳಿಕ ಮನೆಯವರೆಲ್ಲರೂ ಮಧುಶ್ರೀಗಾಗಿ ಅರಸಿ, ವಿಧಿಯಿಲ್ಲದೇ 2025ರ ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆಗ ಪೊಲೀಸರು ಸಹಜವಾಗಿ ಸತೀಶ್ ಹಿರೇಮಠನ ಮೇಲೆ ಅನುಮಾನಗೊಂಡು ವಿಚಾರಣೆ ಪ್ರಾರಂಭಿಸಿದರು. ತನಿಖೆಯ ವೇಳೆ, ಮಧುಶ್ರೀ ನಾಪತ್ತೆಯಾದ ದಿನ ಇಬ್ಬರೂ ಒಂದೇ ಬೈಕ್ನಲ್ಲಿ ಹೋಗುತ್ತಿರುವ ಸಿಸಿ ಟಿವಿ ದೃಶ್ಯದ ತುಣುಕನ್ನೂ ಪೊಲೀಸರು ಪತ್ತೆ ಮಾಡಿದ್ದರು. ಅದಲ್ಲದೆ, ಸತೀಶನ ಮೊಬೈಲ್ನ ಇನ್ನೊಂದು ಸಿಮ್ಗೆ ಬಂದಿದ್ದ ಎಸ್ಎಂಎಸ್ ಒಂದು ಪೊಲೀಸರಿಗೆ ಸುಳಿವು ನೀಡಿತ್ತು. ಆಗ ಬೈಕ್ ಮೇಲೆ ಇಬ್ಬರೂ ಹೋಗಿದ್ದೇನೋ ನಿಜ. ಆದರೆ, ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು, ನಾನು ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕೆ ಹೋಗಿದ್ದೇನೆ ಎಂದು ಕಥೆ ಹೇಳಿದ್ದ.
ತಲೆ ಬುರುಡೆಗಾಗಿ ಅಲೆದಾಟ: ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಸತೀಶ್ ಹಿರೇಮಠ ದಾರಿಗೆ ಬಂದಿದ್ದ. ತನ್ನ ಪ್ರಿಯತಮೆ ಮಧುಶ್ರೀಯನ್ನು ತಾನೇ ಕೊಂದು ಜಮೀನಿನಲ್ಲಿ ಹೂತಿರುವುದಾಗಿ ಒಪ್ಪಿಕೊಂಡಿದ್ದ. ಆಕೆಯ ಶವವನ್ನು ಹೂತಿರುವ ಸ್ಥಳವನ್ನೂ ತೋರಿಸಿದ್ದ. ಈಗ ಎರಡು ದಿನಗಳ ಹಿಂದೆ ಆತ ತೋರಿಸಿದ ಸ್ಥಳದಲ್ಲಿ ಕೆಲ ಮೂಳೆಗಳು ದೊರೆತ್ತಿದ್ದವು. ಆದರೆ, ಯುವತಿಯ ತಲೆ ಬುರುಡೆ ಮಾತ್ರ ಸಿಕ್ಕಿರಲಿಲ್ಲ. ಮಂಗಳವಾರ ಗದಗ ಎಸಿ ಗಂಗಪ್ಪ ಅವರ ಸಮ್ಮುಖದಲ್ಲಿ ಪೊಲೀಸರು ಮಧುಶ್ರೀಯ ತಲೆ ಬುರುಡೆಗಾಗಿ ಶೋಧ ಆರಂಭಿಸಿದಾಗಿನಿಂದಲೂ ಹಂತಕ ಅಧಿಕಾರಿಗಳಿಗೇ ದಾರಿ ತಪ್ಪಿಸಿದ್ದ. 5 ಗಂಟೆಗಳಿಗೂ ಹೆಚ್ಚು ಕಾಲ ಎರಡು ಕಡೆ ಅಗೆದದರೂ ತಲೆ ಬುರುಡೆ ಪತ್ತೆಯಾಗಿಲ್ಲ.
ಬುರುಡೆ ಬಿಟ್ಟ ಹಂತಕ
ಪಿಎಸ್ಐ ಮಾರುತಿ ಜೋಗದಂಡಕರ ಸದರಿ ಪ್ರಕರಣದಲ್ಲಿ ಚಾಣಾಕ್ಷತೆಯಿಂದ ಪ್ರಕರಣ ಬೇಧಿಸಿದ್ದಾರೆ. ಮಾರುತಿ ಜೋಗದಂಡಕರ, ಸಿಪಿಐ ಧೀರಜ್ ಶಿಂಧೆ ನೇತೃತ್ವದಲ್ಲಿ ಸಿಬ್ಬಂದಿಗಳು, ವೈದ್ಯಕೀಯ ಅಧಿಕಾರಿಗಳ ತಂಡ, ಎಫ್ಎಸ್ಎಲ್ ತಂಡಗಳು ಸತೀಶ್ ಹಿರೇಮಠ ತೋರಿಸಿದಲ್ಲೆಲ್ಲಾ ಅಗೆದು ಶೋಧ ನಡೆಸಿದರು. ಮೊದಲು ಅಗೆದ ಸ್ಥಳದಲ್ಲಿ ಯುವತಿಯ ಚಪ್ಪಲಿ, ಬಟ್ಟೆ ಹಾಗೂ ಸುಟ್ಟಿದ್ದ ಕೂದಲುಗಳು ದೊರೆತರೂ ತಲೆ ಬುರುಡೆ ಮಾತ್ರ ಪತ್ತೆಯಾಗಿಲ್ಲ. ತಲೆ ಬುರುಡೆ ಶೋಧ ಕಾರ್ಯವನ್ನು ಮೊಟಕುಗೊಳಿಸಿ ಮಂಗಳವಾರ ವಾಪಸ್ಸಾಗಿದ್ದಾರೆ. ಆದರೆ, ಬುರುಡೆ ಸಿಗುವರೆಗೂ ಶೋಧ ನಿಲ್ಲದು ಎಂದು ಎಸಿ ಗಂಗಪ್ಪ ಹೇಳಿದ್ದಾರೆ.