ಇತ್ತೀಚಿನ ದಶಕಗಳಲ್ಲಿ ಆಹಾರ ಮತ್ತು ಆರೋಗ್ಯದ ಕುರಿತಾದ ಅರಿವು ಹೆಚ್ಚುತ್ತಿದ್ದಂತೆ, ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಕಡೆಗೆ ಜಗತ್ತು ಮತ್ತೆ ಮುಖ ಮಾಡುತ್ತಿದೆ. ಈ ಪರಿವರ್ತನೆಯಲ್ಲಿ ಸಿರಿ ಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಮಯದಲ್ಲಿ, ಸಿರಿ ಧಾನ್ಯಗಳ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅನಂತ ಹುದೆಂಗಜೆ ಅವರು ಬರೆದಿರುವ `ಸಿರಿ-ಸರಿ’ ಪುಸ್ತಕವು ಒಂದು ಮಹತ್ವದ ಕೊಡುಗೆಯಾಗಿದೆ.
ಇದು ಅಡುಗೆ ಪುಸ್ತಕವಂತೂ ಅಲ್ಲವೇ ಅಲ್ಲ. ಬದಲಿಗೆ ಸಿರಿ ಧಾನ್ಯಗಳ ಸಮಗ್ರ ಜ್ಞಾನಕೋಶವಾಗಿ ಹೊರಹೊಮ್ಮಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನವಿರುವ ಎನ್. ಜಯಶಂಕರ ಶರ್ಮ ಅವರು, `ಇದು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಂಶೋಧನೆಗೆ ಆಕರ ಗ್ರಂಥವಾಗಲು ಅರ್ಹತೆಯಿರುವ ಉತ್ಕೃಷ್ಟ ಕೃತಿ’ ಎಂದು ಬಣ್ಣಿಸಿರುವುದರಲ್ಲಿ ಅತಿಶಯೋಕ್ತಿ ಇಲ್ಲ.
ಈ ಮೊದಲು ನಿಮಗೆಷ್ಟು ಹಣ ಬೇಕು, ಭಾರತ ಇಸ್ಲಾಂ ಮತ್ತು ಗಾಂಧಿ, ಇದುವೇ ನಮ್ಮ ಸಂಸ್ಕೃತಿ ಮುಂತಾದ ಸ್ವತಂತ್ರ ಕೃತಿಗಳು, ಎಂ.ವಿ. ಚಕ್ರಪಾಣಿ ಸಮಗ್ರ ಸಾಹಿತ್ಯದಂತಹ ಸಂಪಾದಿತ ಕೃತಿಗಳು ಮತ್ತು ಸಾವಿರಾರು ಲೇಖನಗಳ ಮೂಲಕ ಓದುಗರಿಗೆ ಪರಿಚಿತರಾಗಿರುವ ಅನಂತ ಹುದೆಂಗಜೆ ಅವರು ಈಗ `ಸಿರಿಧಾನ್ಯ: ಸಿರಿ-ಸರಿ’ ಕೃತಿಯ ಮೂಲಕ, ಸಿರಿಧಾನ್ಯಗಳ ಅಗಾಧ ಜಗತ್ತನ್ನು ಓದುಗರಿಗೆ ಪರಿಚಯಿಸಿದ್ದಾರೆ. ಪುಸ್ತಕವು ಅತ್ಯಂತ ಮಾಹಿತಿಪೂರ್ಣವಾಗಿದ್ದು, ಸಿರಿ ಧಾನ್ಯಗಳ ಕುರಿತಾದ ಅನೇಕ ಮಿಥ್ಯೆಗಳನ್ನು ನಿವಾರಿಸಿ, ಅವುಗಳ ನಿಜವಾದ ಸತ್ವವನ್ನೂ ಮಹತ್ವವನ್ನೂ ಅನಾವರಣಗೊಳಿಸಿದೆ.
`ಸಿರಿ-ಸರಿ’ ಪುಸ್ತಕದ ಪ್ರಮುಖ ಆಕರ್ಷಣೆ, ಸಿರಿ ಧಾನ್ಯಗಳ ಇತಿಹಾಸದ ಕುರಿತು ನೀಡುವ ಅಮೂಲ್ಯ ಮಾಹಿತಿ. ಸೃಷ್ಟಿಯ ಆದಿಯಿಂದ ಮಾನವನ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳ ಪಾತ್ರ ಎಂತಹದು, ಅವು ಕಾಲಾನುಕ್ರಮದಲ್ಲಿ ಹೇಗೆ ಬಳಕೆಗೆ ಬಂದವು ಎಂಬಂತಹ ಆಳವಾದ ವಿಶ್ಲೇಷಣೆಗಳನ್ನು ಲೇಖಕರು ಸರಳ ಮತ್ತು ಆಕರ್ಷಕ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಇತಿಹಾಸದ ಪ್ರಜ್ಞೆಯು, ಸಿರಿ ಧಾನ್ಯಗಳನ್ನು ಕೇವಲ ಆಹಾರವನ್ನಾಗಿ ನೋಡದೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿ ನೋಡಲು ಪ್ರೇರೇಪಿಸುತ್ತದೆ.
ಪುಸ್ತಕವು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ಸಿರಿ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ವಿಸ್ತೃತ ಮಾಹಿತಿ ನೀಡುತ್ತದೆ. ಪ್ರತಿ ಸಿರಿ ಧಾನ್ಯದಲ್ಲಿರುವ ವಿಟಮಿನ್ಗಳು, ಖನಿಜಗಳು, ನಾರಿನಂಶ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳ ಕುರಿತು ವೈಜ್ಞಾನಿಕ ವಿವರಣೆಗಳನ್ನು ಹೊಂದಿದೆ. ಇದು ಓದುಗರಿಗೆ ತಮ್ಮ ಆರೋಗ್ಯಕ್ಕೆ ಯಾವ ಸಿರಿ ಧಾನ್ಯಗಳು ಹೆಚ್ಚು ಸೂಕ್ತ ಎಂಬುದನ್ನು ಅರಿಯಲು ಸಹಾಯ ಮಾಡುತ್ತದೆ. ಸಜ್ಜೆ, ನವಣೆ, ಸಾಮೆ, ಹಾರಕ, ಊದಲು ಇವುಗಳ ವೈಶಿಷ್ಟ್ಯಗಳು, ಆರೋಗ್ಯ ಪ್ರಯೋಜನಗಳು ಮತ್ತು ಇವುಗಳನ್ನು ಆಹಾರದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಲೇಖಕರು ಆಳವಾದ ತಿಳಿವಳಿಕೆ ನೀಡುತ್ತಾರೆ. ಮಧುಮೇಹ ನಿಯಂತ್ರಣದಿಂದ ಹಿಡಿದು ಹೃದಯದ ಆರೋಗ್ಯದವರೆಗೆ, ಸಿರಿ ಧಾನ್ಯಗಳು ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಬಲ್ಲವು ಎಂಬುದನ್ನು ಅವರು ಉದಾಹರಣೆ ಸಹಿತ ವಿವರಿಸುತ್ತಾರೆ.
`ಸಿರಿ-ಸರಿ’ ಪುಸ್ತಕದ ಮತ್ತೊಂದು ಪ್ರಮುಖ ಭಾಗವೆಂದರೆ ಸಿರಿ ಧಾನ್ಯಗಳನ್ನು ಬಳಸಿ ತಯಾರಿಸಬಹುದಾದ ಅಡುಗೆಗಳು. ಇದು ಕೇವಲ ಕೆಲವು ಪಾಕವಿಧಾನಗಳ ಸಂಗ್ರಹವಲ್ಲ, ಬದಲಿಗೆ ಸಿರಿ ಧಾನ್ಯಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಹೇಗೆ ಸುಲಭವಾಗಿ ಮತ್ತು ರುಚಿಕರವಾಗಿ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತದೆ. ಸಾಂಪ್ರದಾಯಿಕ ಅಡುಗೆಗಳಿಂದ ಹಿಡಿದು, ನವೀನ ಖಾದ್ಯಗಳವರೆಗೆ ಅನೇಕ ಪಾಕವಿಧಾನಗಳನ್ನು ನೀಡಲಾಗಿದೆ.
ಪ್ರತಿ ಪಾಕವಿಧಾನವನ್ನು ಸ್ಪಷ್ಟವಾದ ಸೂಚನೆಗಳೊಂದಿಗೆ, ಸುಲಭವಾಗಿ ಅನುಸರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಓದುಗರಿಗೆ ಅಡುಗೆಮನೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಪ್ರೇರಣೆ ನೀಡುತ್ತದೆ. ಸಿರಿ ಧಾನ್ಯಗಳನ್ನು ಸಾಂಪ್ರದಾಯಿಕ ಆಹಾರಗಳಾಗಿ ಮಾತ್ರವೇ ನೋಡದೆ, ಅವುಗಳ ವೈವಿಧ್ಯಮಯ ಸಾಧ್ಯತೆಗಳನ್ನು ಅರಿಯಲು ಸಹಾಯ ಮಾಡುತ್ತದೆ. ಲೇಖಕರು ನೀಡಿರುವ ಅಡುಗೆ ವಿಧಾನಗಳು ಸರಳವಾಗಿದ್ದು, ಸಿರಿ ಧಾನ್ಯಗಳನ್ನು ಬಳಸಲು ಹಿಂಜರಿಯುವವರಿಗೂ ಪ್ರೋತ್ಸಾಹ ನೀಡುತ್ತವೆ.
ಅನಂತ ಹುದೆಂಗಜೆ ಅವರ ಬರವಣಿಗೆಯ ಶೈಲಿಯು ಅತ್ಯಂತ ಸರಳವೂ, ಆಕರ್ಷಕವೂ ಆಗಿದೆ. ಕ್ಲಿಷ್ಟವಾದ ವಿಷಯಗಳನ್ನು ಕೂಡ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಿದ್ದಾರೆ. ಪುಸ್ತಕದ ವಿನ್ಯಾಸ ಮತ್ತು ಚಿತ್ರಣಗಳೂ ಓದುಗರನ್ನು ಆಕರ್ಷಿಸುತ್ತವೆ. ಲೇಖಕರು ಸಿರಿ ಧಾನ್ಯಗಳ ಕುರಿತು ಆಳವಾದ ಅಧ್ಯಯನ ನಡೆಸಿ, ವೈಯಕ್ತಿಕ ಅನುಭವಗಳನ್ನೂ ಹಂಚಿಕೊಂಡಿರುವುದು ಪುಸ್ತಕಕ್ಕೆ ಒಂದು ವಿಶಿಷ್ಟ ಆಯಾಮವನ್ನು ನೀಡುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವೀ.ಹೆಗ್ಗಡೆಯವರು ಹಾರೈಕೆಯ ರೂಪದಲ್ಲಿ ಬರೆದಿರುವ ನುಡಿಗಳು ಮೌಲಿಕವಾಗಿವೆ. ಡಾ. ಎಲ್.ಎಚ್. ಮಂಜುನಾಥ್ ಅವರ ಪ್ರವೇಶಿಕೆಯು ಮತ್ತೊಂದು ಸ್ವತಂತ್ರ ಕೃತಿ ರಚಿಸುವಷ್ಟು ವಿಷಯಗಳನ್ನು ಹೊಂದಿದೆ. ಸಿರಿ ಘಟಕದ ನಿರ್ದೇಶಕ ದಿನೇಶ್ ಎಂ. ಕೆರ್ವಾಶೆ ಅವರ ಸಂದರ್ಶನ ಸಿರಿಧಾನ್ಯಗಳ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ. ವಿಷಯ ಮಂಡನೆಗೆ ಪೂರಕವಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವ ಗಣ್ಯರ ಬರೆಹಗಳನ್ನು ಬಳಸಿಕೊಂಡಿರುವುದು ಕೃತಿಗೆ ಹೊಸ ಮಜಲಿನ ವಿಸ್ತಾರವನ್ನು ನೀಡಿದೆ. ಈ ಪ್ರಯತ್ನ ಶ್ಲಾಘನೀಯ. ಸಿರಿ ಧಾನ್ಯ ಬೆಳೆದವರ ಅನುಭವಗಳನ್ನು ಸೇರಿಸಿದ್ದು ಪುಸ್ತಕದ ಮೌಲ್ಯವನ್ನು ದುಪ್ಪಟ್ಟಾಗಿಸಿದೆ.
ಅನಂತ ಹುದೆಂಗಜೆ ಅವರ `ಸಿರಿ-ಸರಿ’ ಸಿರಿ ಧಾನ್ಯಗಳ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸುವ, ಆಸಕ್ತಿಯಿಂದ ಓದುವಂತೆ ಮಾಡುವ ಒಂದು ಅದ್ಭುತ ಕೃತಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮತ್ತು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಆಹಾರ ಪ್ರಿಯರು, ಆರೋಗ್ಯದ ಬಗ್ಗೆ ಕಾಳಜಿಯುಳ್ಳವರು, ಸಾಂಪ್ರದಾಯಿಕ ಅಡುಗೆಗಳಲ್ಲಿ ಅಭಿರುಚಿ ಹೊಂದಿರುವವರು ಎಲ್ಲರಿಗೂ ಈ ಪುಸ್ತಕವು ಒಂದು ಅನಿವಾರ್ಯ ಮಾರ್ಗದರ್ಶಿಯಾಗಿದೆ. ಆರೋಗ್ಯಕರ ಜೀವನದ ಕಡೆಗೆ ನಮ್ಮನ್ನು ಕರೆದೊಯ್ಯುವ, ಎಲ್ಲರ ಮನೆಗಳಲ್ಲೂ-ಮನಗಳಲ್ಲೂ ಇರಬೇಕಾದ ಒಂದು ದಾರಿದೀಪವಾಗಿದೆ.
– ಮಿಥುನ್ ಎಂ.ವಿ.
ಶಿಕ್ಷಕರು, ಕಾರ್ಕಳ-ಉಡುಪಿ ಜಿಲ್ಲೆ.
ಕೃತಿ: ಸಿರಿಧಾನ್ಯ: ಸಿರಿ-ಸರಿ
ಲೇಖಕರು: ಅನಂತ ಹುದೆಂಗಜೆ
ಪ್ರಕಾಶಕರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಧರ್ಮಸ್ಥಳ
ಪುಟಗಳು: 164
ಬೆಲೆ: ₹200