ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆಧ್ಯಾತ್ಮಿಕ ಜೀವನ ಮನುಷ್ಯನ ಮನೋಸ್ಥೈರ್ಯಕ್ಕೆ ರಾಮಬಾಣವಾಗಿದೆ. ನಿತ್ಯವೂ ಧ್ಯಾನ ಮಾಡುವುದರಿಂದ ಮಾನಸಿಕ ಕಾಯಿಲೆಗಳ ಜೊತೆಗೆ ಅನೇಕ ರೋಗಗಳಿಗೂ ಅದು ಉತ್ತಮ ಪರಿಹಾರವಾಗಿದೆ ಎಂದು ಗದಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ. ಕೆ. ಜಯಂತಿ ಅಕ್ಕನವರು ಹೇಳಿದರು.
ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಜಸ್ಥಾನದ ಕೇಂದ್ರಸ್ಥಾನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸನ್ಯಾಸಿನಿ ಜಗದಂಬಾ ಸರಸ್ವತಿಯವರ ಸ್ಮೃತಿ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಾಗಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಂತಹ ಸಂಸ್ಥೆಯನ್ನು ತಮ್ಮ 16ನೇ ವಯಸ್ಸಿನಲ್ಲಿಯೇ ರಾಜಸ್ಥಾನದ ಅಬು ಪರ್ವತದಲ್ಲಿ ಸ್ಥಾಪಿಸಿ ಸಂಸ್ಥೆಯ ಬೆನ್ನೆಲುಬಾಗಿ ನಿಂತವರು ಜಗದಂಬಾ ಸರಸ್ವತಿಯವರು. ಅವರು 1952ರಲ್ಲಿ ಕರ್ನಾಟಕಕ್ಕೆ ಹೃದಯ ಪುಷ್ಪ ದಾದಿಯಾಗಿ ಪರಿಚಿತಗೊಂಡರು. ಅವರೊಂದಿಗೆ ರಾಜಋಷಿ ದಾದಾ ಲೇಖರಾಜರ ಆಧ್ಯಾತ್ಮದ ಜ್ಞಾನದಿಂದಾಗಿ ಇಂದು ದೇಶದಾದ್ಯಾಂತ ಸಾವಿರಾರು ಕೇಂದ್ರಗಳನ್ನು ತೆರೆಯುವಂತಾಗಿದೆ ಎಂದು ತಿಳಿಸಿದರು.
ನರೇಗಲ್ಲ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ಆಧ್ಯಾತ್ಮ ಶಿಕ್ಷಣ ಮನಸ್ಸನ್ನು ಶಾಂತಗೊಳಿಸುವುದಲ್ಲದೆ ಒತ್ತಡ ಮುಕ್ತ ಜೀವನ ಸಾಗಿಸಲು ಸಹಕಾರಿಯಾಗಲಿದೆ. ಪ್ರತಿನಿತ್ಯ ನಮ್ಮ ಸಂಸ್ಥೆಯಲ್ಲಿ ಜನಸಾಮಾನ್ಯರ ಒತ್ತಡ ಮುಕ್ತ ಜೀವನಕ್ಕಾಗಿ ಆಧ್ಯಾತ್ಮ ಜ್ಞಾನವನ್ನು ಉಣಬಡಿಸಲಾಗುತ್ತಿದೆ. ಇಂತಹ ಹಲವಾರು ಕೇಂದ್ರಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ನೀಡುತ್ತಿರುವ ನಮಗೆಲ್ಲರಿಗೂ ಜಯಂತಿ ಅಕ್ಕನವರು ಸಮರ್ಪಕ ಮಾರ್ಗದರ್ಶಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ ಹಿರೇಮಠ, ರಾಜಣ್ಣ ಭೋಪಳಾಪುರ, ಧರ್ಮಾಯತ, ಹೊಸಮನಿ, ಇನ್ನಿತರರು ಉಪಸ್ಥಿತರಿದ್ದರು.