ಅಂತರಾಷ್ಟ್ರೀಯ ಸಂಶೋಧನೆಗೆ ಧಾರವಾಡ ಐಐಟಿ, ಕೃಷಿ ವಿವಿ ಅನನ್ಯ ಕೊಡುಗೆ: ಸಚಿವ ಜೋಶಿ

0
Spread the love

ನವದೆಹಲಿ: ಬಾಹ್ಯಾಕಾಶ ಕೃಷಿ ಮತ್ತು ಗಗನಯಾತ್ರಿಗಳ ಪೋಷಣೆಗೆ ಅಂತಾರಾಷ್ಟ್ರೀಯವಾಗಿ ಕೈಗೊಂಡಿರುವ ಮಹತ್ತರ ಅಧ್ಯಯನಕ್ಕೆ ಧಾರವಾಡದ ಅನನ್ಯ ಕೊಡುಗೆ ಸಲ್ಲುತ್ತಿದೆ. ವಿದ್ಯಾಕಾಶಿ ಆಗಿರುವ ಧಾರವಾಡ ಬಾಹ್ಯಾಕಾಶವರೆಗೆ ವಿಜ್ಞಾನ ಸ್ಫೂರ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಸುದೀರ್ಘ 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಭಾರತೀಯ ಗಗನಯಾನಿ ತೆರಳುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿ. ಅಂತೆಯೇ ಇದರಲ್ಲಿ ಐಐಟಿ ಧಾರವಾಡ ಮತ್ತು ಯುಎಎಸ್ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಸಹಯೋಗ ಇರುವುದು ಧಾರವಾಡಕ್ಕೆ ಹೆಮ್ಮೆಯ ಗರಿ ಮೂಡಿದೆ ಎಂದಿದ್ದಾರೆ.

ಧಾರವಾಡ ಐಐಟಿ ಹಾಗೂ ಕೃಷಿ ವಿಶ್ವವಿದ್ಯಾಲಯ ಸಂಶೋಧಕರು ಕೈಗೊಂಡಿರುವ ಮಹತ್ವದ ವಿಜ್ಞಾನ ಯೋಜನೆ ‘Sprouting in Space’ Ax-4 ಮಿಷನ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಪ್ರಯೋಗದಲ್ಲಿ ಹೆಸರುಕಾಳು ಮತ್ತು ಮೆಂತೆ ಬೀಜ ಬಾಹ್ಯಾಕಾಶದಲ್ಲಿ ಮೊಳೆಯುವ ಪ್ರಕ್ರಿಯೆ ನಡೆಸಲಾಗುತ್ತಿದೆ.

ಗಗನಯಾತ್ರಿಗಳು ಈ ಬೀಜಗಳಿಗೆ ನೀರು ಸೇರಿಸಿ ಬೀಜ ಮೊಳೆಯುವ ಪ್ರಕ್ರಿಯೆ ನಡೆಸಲಿದ್ದಾರೆ. ಈ ಮೊಳಕೆ ಕಾಳು ಬಾಹ್ಯಾಕಾಶ ಯಾನಿಗಳಿಗೆ ತಾಜಾ ಮತ್ತು ಪೌಷ್ಠಿಕಾಂಶ ಆಹಾರ ಪೂರೈಸಲು ಸಹಾಯಕವಾಗಲಿದೆ. ಬಾಹ್ಯಾಕಾಶದಲ್ಲಿ ಬೀಜ ಮೊಳಕೆಯೊಡೆಯುವ ಇಂಥ ಅನನ್ಯ ಅಧ್ಯಯನದ ಅಂತರಾಷ್ಟ್ರೀಯ ಯೋಜನೆ-ಆಕ್ಸಿಯಮ್ ಮಿಷನ್ 4ನಲ್ಲಿ ಧಾರವಾಡ ಐಐಟಿ ಮತ್ತು ಧಾರವಾಡದ ಯುಎಎಸ್ ಕೃಷಿ ವಿಶ್ವವಿದ್ಯಾಲಯ ಕೊಡುಗೆ ಅಮೂಲ್ಯವಾಗಿದೆ.

ಈ ಸಂಶೋಧನೆ ಭಾರತೀಯ ಗಗನಯಾತ್ರಿಗಳಿಗೆ ಸುದೀರ್ಘ ಅವಧಿ ಪೌಷ್ಠಿಕಾಂಶ ಆಹಾರ ಒದಗಿಸುಲು ನಾಂದಿ ಹಾಡುತ್ತಿದೆ. ಹೆಸರುಕಾಳು ಮತ್ತು ಮೆಂತ್ಯೆ ಭಾರತೀಯ ಆಹಾರ ಪದ್ಧತಿಯಲ್ಲಿ ವಿಶಿಷ್ಠವಾಗಿದ್ದು, ಹೇರಳ ಪೋಷಕಾಂಶಯುಳ್ಳದ್ದಾಗಿದೆ. ಬಾಹ್ಯಾಕಾಶದಲ್ಲಿ ಲಭ್ಯವಿರುವ ಸ್ಥಳ, ತೂಕ ಹಾಗೂ ಸಂಪನ್ಮೂಲಗಳ ಮಿತಿ ಗಮನದಲ್ಲಿಟ್ಟುಕೊಂಡು ಈ ರೀತಿ ಮೊಳಕೆ ಕಾಳು ಆಹಾರೋತ್ಪತ್ತಿಯ ನಾವೀನ್ಯತೆಗೆ ದಾರಿ ತೋರಿದೆ ನಮ್ಮ ಧಾರವಾಡ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ.ರವಿಕುಮಾರ್ ಹೊಸಮನಿ ಮತ್ತು ಐಐಟಿ ಧಾರವಾಡದ ಡಾ.ಸುಧೀರ್ ಸಿದ್ದಾಪುರೆಡ್ಡಿ ಅವರು ಇದರ ಮುಂದಾಳತ್ವ ವಹಿಸಿದ್ದು, ದೇಶದ ವಿಜ್ಞಾನ ಕ್ಷೇತ್ರದಲ್ಲೇ ಗಮನ ಸೆಳೆದಿದ್ದಾರೆ. ಧಾರವಾಡ ಈಗ ಕೇವಲ ಶೈಕ್ಷಣಿಕ ನಗರಿ ಮಾತ್ರವಲ್ಲದೆ, ವಿಜ್ಞಾನ ಸೃಜನಶೀಲತೆಯ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ ಎಂಬುದುಕ್ಕೆ ಇದು ನಿದರ್ಶನ.ಬಾಹ್ಯಾಕಾಶ ಕೃಷಿ ಮತ್ತು ಗಗನಯಾತ್ರಿಗಳ ಪೋಷಣೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದ್ದು, ಧಾರವಾಡ ನಾವೀನ್ಯತೆ ಮತ್ತು ವೈಜ್ಞಾನಿಕ ಪ್ರಗತಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here