ವಿಜೃಂಭಣೆಯಿಂದ ಜಾತ್ರಾಮಹೋತ್ಸವ ಯಶಸ್ವಿಗೊಳಿಸೋಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿರುವ ಮಹಿಮಾ ಪುರುಷರಾದ ಶ್ರೀಕ್ಷೇತ್ರ ವರವಿಯ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವವನ್ನು ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್, ನಾಡಿನ ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು, ಮೌನೇಶ್ವ ಸ್ವಾಮಿಗಳು, ವರವಿ ಗ್ರಾಮದ ಸಮಸ್ತ ಹಿರಿಯರು, ಹಾಗೂ ಗದಗ ಜಿಲ್ಲೆಯ ಸರ್ವ ಸಮಾಜ ಬಾಂಧವರು ಸೇರಿ ಅತ್ಯಂತ ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಆಚರಿಸೋಣ ಎಂದು ಟ್ರಸ್ಟ್ ಅಧ್ಯಕ್ಷ ಮೋಹನ್ ಸಿದ್ಧಪ್ಪ ನರಗುಂದ ಹೇಳಿದರು.

Advertisement

ಅವರು ಬುಧವಾರ ಶ್ರೀಕ್ಷೇತ್ರ ವರವಿ ಮೌನೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಆಯೋಜಿಸಿದ್ದ ಜಾತ್ರಾಮಹೋತ್ಸವ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಾತ್ರಾಮಹೋತ್ಸವದ ಅಂಗವಾಗಿ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಪ್ರತಿಯೊಂದು ಸಮಿತಿಯಲ್ಲಿ ಪಾಲ್ಗೊಂಡವರು ಸಮರ್ಥವಾಗಿ ಸಮಿತಿಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮೌನೇಶ್ವರ ಸೇವೆಯನ್ನು ನಾವೆಲ್ಲ ಭಕ್ತಿ, ಶ್ರದ್ಧೆಯಿಂದ ನಿರ್ವಹಿಸೋಣ. ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ಸರ್ಕಾರದಿಂದ ಒಂದು ಕೋಟಿ ರೂ ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದ್ದಾರೆ. ಆ ಹಣವನ್ನು ಸಭಾಮಂಟಪ ಕಾಮಗಾರಿಗೆ ವಿನಿಯೋಗಿಸಲಾಗುವುದು ಎಂದರು.

ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಕೊಪ್ಪ ಮಾತನಾಡಿ, ಜಾತ್ರಾಮಹೋತ್ಸವದ ಜೊತೆಗೆ ನಿರ್ಮಾಣ ಹಂತದಲ್ಲಿರುವ ಸಭಾಮಂಟಪವನ್ನು ಪೂರ್ಣಗೊಳಿಸಲು ಎಲ್ಲರೂ ಕೈಜೋಡಿಸೋಣ ಎಂದರು.

ಗದಗ ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರಾದ ದೇವೆಂದ್ರಪ್ಪ ಬಡಿಗೇರ, ವಿಶ್ವಕರ್ಮ ಸಮಾಜದ ಗಣ್ಯರಾದ ವೀರಣ್ಣ ಸೊಲ್ಲಾಪೂರ, ಮೌನೇಶ ಹರಪನಹಳ್ಳಿ, ರುದ್ರಪ್ಪ ಬಡಿಗೇರ, ಮುತ್ತಣ್ಣ ಬಡಿಗೇರ, ರಮೇಶ ಬಡಿಗೇರ ಸೇರಿದಂತೆ ಅನೇಕ ಮುಖಂಡರು ಜಾತ್ರಾಮಹೋತ್ಸವ ಯಶಸ್ವಿಗೆ ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಶ್ರೀ ಸೋಮಲಿಂಗಯ್ಯಸ್ವಾಮಿ ಒಡೆಯರ ಸ್ವಾಮೀಜಿ, ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ ಸೋಮಣ್ಣ ಹುಲಬಜಾರ, ಹೂವಪ್ಪ ಸೊರಟೂರ, ವಿಠ್ಠಲ ಸವದಿ, ಮೌನೇಶ್ವರ ಅಕ್ಕಸಾಲಿ, ಕೆ. ಮನೋಹರ, ಶ್ರೀಧರ ಕೊಣ್ಣೂರ, ಮೌನೇಶ ಚಿ. ಬಡಿಗೇರ(ನರೇಗಲ್ಲ), ವೀರಣ್ಣ ಸೊಲ್ಲಾಪೂರ, ಮಹೇಶ ಕಮ್ಮಾರ, ನಾಗರಾಜ ಕಮ್ಮಾರ, ವೀರಣ್ಣ ಹಲವಾಗಲಿ, ನಾರಾಯಣಪ್ಪ ವಡ್ಡಟ್ಟಿ, ಮೌನೇಶ ಕಾ. ಹೊಸಮನಿ, ಮೌನೇಶ ರಟ್ಟಿಹಳ್ಳಿ, ಸೋಮಣ್ಣ ಕುಂದಣಗಾರ ಸೇರಿದಂತೆ ವಿವಿಧ ಜಿಲ್ಲೆಗಳ ವಿಶ್ವಕರ್ಮ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಶಿಕ್ಷಕ ಎಸ್.ಎನ್. ಬಡಿಗೇರ ಪ್ರಾರ್ಥಿಸಿದರು. ಪದಾಧಿಕಾರಿಗಳಾದ ಕೊಟ್ರೇಶ ಆಚಾರ್ಯ ಸ್ವಾಗತಿಸಿದರು. ಚಂದ್ರಕಾಂತ ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವಕರ್ಮ ಸಮಾಜದ ಮುಖಂಡ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.

ಪದಾಧಿಕಾರಿ ಚಂದ್ರಶೇಖರ ಸೋನಾರ ಮಾತನಾಡಿ, ಜಾತ್ರೆಯ ಸಮಯದಲ್ಲಿ ಯಾವುದೇ ನ್ಯೂನ್ಯತೆಗಳಾಗದಂತೆ ನೋಡಿಕೊಳ್ಳೋಣ. ಒಟ್ಟಾರೆ ಸಮಾಜದ ಸರ್ವರೂ ಸೇರಿ ಈ ಬಾರಿಯ ಜಾತ್ರಾಮಹೋತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here