ಹಾವೇರಿ:- FSL ವರದಿಯನ್ನೇ ತಿರುಚಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ವೈದ್ಯನೋರ್ವ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹಾವೇರಿಯಲ್ಲಿ ಜರುಗಿದೆ. ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯವೈದ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಗುರುರಾಜ ಭೀಮರಾಯ ಬಿರಾದಾರ ಲೋಕಾ ಬಲೆಗೆ ಬಿದ್ದ ಆರೋಪಿ.
ಏಪ್ರಿಲ್ 29ರಂದು ನಗರದ ಚಿರಾಯು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವಂದನಾ ತುಪ್ಪದ ಎಂಬ ಬಾಲಕಿ ಮೃತಪಟ್ಟಿದ್ದಳು ಎಂಬ ಆರೋಪ ಕೇಳಿ ಬಂದಿತ್ತು. ಘಟನೆ ಸಂಬಂಧ ಆಸ್ಪತ್ರೆ ವಿರುದ್ದ ದೂರು ದಾಖಲಾಗಿತ್ತು. ಡಾ.ಗುರುರಾಜ ಬಿರಾದಾರ ಅವರು, ಮೃತಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಿದ್ದರು.
ಬಳಿಕ ಎಫ್ ಎಸ್ ಎಲ್ ವರದಿ ದೂರುದಾರ ಪರವಾಗಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಡಿವೈಎಸ್ಪಿ ಮಧುಸೂದನ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗುರುರಾಜ ಬಿರಾದಾರ ಜೊತೆ ಮತ್ತೋರ್ವ ಖಾಸಗಿ ವ್ಯಕ್ತಿ ಚನ್ನಬಸಯ್ಯ ಕುಲಕರ್ಣಿ ವಶಕ್ಕೆ ಪಡೆದಿರುವ ಲೋಕಾ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.