ಚಾಮರಾಜನಗರ: ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಅನುಮಾನಾಸ್ಪದ ಸಾವು ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದೇ ದಿನದಲ್ಲಿ ಐದು ಹುಲಿ ಸಾವನ್ನಪ್ಪಿರುವುದು ದೇಶದಲ್ಲೇ ಮೊದಲು. ಹೀಗಾಗಿ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಿದೆ.
ಇದೀಗ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಾದ ಅಲಿಯಾಸ್ ಮಾದುರಾಜು, ನಾಗರಾಜ್ ಮತ್ತು ಕೂನಪ್ಪ ಆರೋಪಿಗಳಾಗಿದ್ದು, ಮಾದ ಅಲಿಯಾಸ್ ಮಾದುರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ಬಲಿ ಪಡೆದಿತ್ತು. ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರಿಟ್ಟಿದ್ದ. ಬಳಿಕ ಹಸು ಕೊಂದ ಹುಲಿ ಕೊಲ್ಲಲು ಇಬ್ಬರು ನಿರ್ಧರಿಸಿದ್ದರು.
ಹಾಗಾಗಿ ಹುಲಿ ಕೊಲ್ಲಲು ಕ್ರಿಮಿನಾಶಕ ಕೂಡ ತಂದಿದ್ದರು. ನಾಗರಾಜ್ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಮರಿಗಳು ಸತ್ತಿದ್ದವು. ಇತ್ತ ಹುಲಿಗಳು ಸತ್ತಿದ್ದನ್ನು ನೋಡಿ ಮಾದುರಾಜು ಸಂತಸ ಪಟ್ಟಿದ್ದ. ವಿಚಾರಣೆ ವೇಳೆ ಆರೋಪಿಗಳು ಒಂದೊಂದೆ ಸತ್ಯವನ್ನು ಬಾಯ್ಬಿಡುತ್ತಿದ್ದಾರೆ.
ಪ್ರಕರಣ ಬೆನ್ನಲ್ಲೇ ಮಾದ ಅಲಿಯಾಸ್ ಮಾದುರಾಜು ಪರಾರಿಯಾಗಿದ್ದ. ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮಾದುರಾಜು ನನ್ನು ಬಂಧಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ಮಾದ ಆರೋಪಿ ಎಂಬುದು ದೃಢವಾಗಿದ್ದು,
ತನ್ನ ಹಸುವನ್ನ ಕೊಂದಿದ್ದಕ್ಕೆ ವಿಷ ಹಾಕಿರುವುದಾಗಿ ಮಾದ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾರೆ. ಆದರೆ ಪುತ್ರ ಮಾದನನ್ನು ಬಚಾವ್ ಮಾಡಲು ತಂದೆ ಶಿವಣ್ಣ ನಾನೇ ವಿಷ ಹಾಕಿರುವುದಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದರು. ಹಾಗಾಗಿ ಮಾದ ತಂದೆ ಶಿವಣ್ಣನನ್ನು ಪ್ರಕರಣದಿಂದ ಕೈಬಿಡಲಾಗಿದೆ.