ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮದಲ್ಲಿನ ಕಸ ಸಾಗಣೆ ವಾಹನ ಚಾಲನೆಗೆ ಮಹಿಳೆಯರು ಸಾರಥ್ಯ ವಹಿಸಿರುವುದು ಹೆಮ್ಮೆಯ ಸಂಗತಿ ಎಂದು ತಾಲೂಕು ಪಂಚಾಯಿತಿ ನೋಡಲ್ ಅಧಿಕಾರಿ ಎಂ.ವಿ. ಚಳಗೇರಿ ಹೇಳಿದರು.
ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ಗುರುವಾರ ಮಹಿಳಾ ಚಾಲಕರಿಗೆ ಕಸ ಸಾಗಾಣಿಕೆ ವಾಹನದ ಕೀಲಿ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ 8 ಗ್ರಾಮದ ಕಸ ಸಾಗಾಣಿಕೆ ವಾಹನಗಳಿಗೆ ಮಹಿಳೆಯರೇ ಚಾಲಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೇರಣೆಯಾಗಿದ್ದಾರೆ. ಗ್ರಾಮದ ಪ್ರತಿ ಮನೆಯಿಂದ ಒಣ ಕಸ/ ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹ ಮಾಡಿ ಕಸ ವಿಲೇವಾರಿ ಘಟಕಕ್ಕೆ ಸಾಗಾಣಿಕೆ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಕಸ ವಿಲೇವಾರಿ ವಾಹನ ಚಾಲನೆ ಮಾಡುವ ಮಹಿಳೆಯರಿಗೆ ತರಬೇತಿ ಹಾಗೂ ಚಾಲನಾ ಪ್ರಮಾಣ ಪತ್ರ ನೀಡಿ ಅವರ ಸ್ವಾವಲಂಬಿ ಜೀವನಕ್ಕೆ ಅಣಿಯಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಪ್ರೇಮಕ್ಕ ಲಮಾಣಿ, ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ, ನಿಂಗಪ್ಪ ಪ್ಯಾಟಿ, ಗಣೇಶ ನಾಯ್ಕ, ಸೋಮಣ್ಣ ಹವಳದ, ಕಮಲವ್ವ ಲಮಾಣಿ, ಹರೀಶ್ ಲಮಾಣಿ, ಪಿಡಿಓ ಸವಿತಾ ಸೋಮಣ್ಣನವರ, ಕಾರ್ಯದರ್ಶಿ ಎಸ್.ಕೆ. ಡಂಬಳ, ಕಸ ವಿಲೇವಾರಿ ವಾಹನದ ಚಾಲಕಿ ಮಂಜುಳಾ ಹರಿಜನ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ತಾ.ಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಗ್ರಾಮೀಣ ಭಾಗದ ಜನರು ಕಸವನ್ನು ಎಲ್ಲೆಂದರಲ್ಲಿ ಚೆಲ್ಲಿ ಪರಿಸರ ಹಾಳು ಮಾಡುವ ಬದಲು ನಿಮ್ಮ ಬಾಗಿಲಿಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ಕಸ ಹಾಕುವ ಕಾರ್ಯ ಮಾಡಬೇಕು. ಇಂತಹ ಕಸ ಸಾಗಿಸುವ ವಾಹನದ ಚಾಲನೆಯನ್ನು ಮಹಿಳೆಯರು ಮಾಡುತ್ತಿರುವುದು ಶ್ಲಾಘನೀಯ ಎಂದರು.