ವಿಜಯಸಾಕ್ಷಿ ಸುದ್ದಿ, ಮುಧೋಳ: ಹೆತ್ತ ತಂದೆ-ತಾಯಿಯ ಮಮತೆ, ಹುಟ್ಟೂರಿನ ಜನರ ಪ್ರೀತಿ, ಗೌರವ, ಕಲಿಸಿದ ಗುರುಗಳು ನೀಡಿದ ವಿದ್ಯೆಗೆ ಬೆಲೆ ಕಟ್ಟಲಾಗದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ತಿನಲ್ಲಿ 45 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಯಡಹಳ್ಳಿಯ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯಡಹಳ್ಳಿಯ ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಿಮ್ಮ ಹಾಗೆ ಇಲ್ಲಿಯೇ ಹುಟ್ಟಿ, ಇಲ್ಲಿಯೇ ಕಲಿತು ಊರಿನ ಪ್ರತಿಯೊಂದು ಆಗು-ಹೋಗುಗಳನ್ನು ನೋಡುತ್ತಾ ಬೆಳೆದು ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ವಿಶೇಷವಾಗಿ ನನ್ನ ಹೆತ್ತ ತಂದೆ-ತಾಯಿಗಳ ಪ್ರೀತಿ, ಹಾರೈಕೆ, ತ್ಯಾಗಗಳಿಂದ ಇದೆಲ್ಲ ಸಾಧ್ಯವಾಗಿದೆ. 45 ವರ್ಷಗಳಿಂದ ನನ್ನೊಂದಿಗೆ ಇದ್ದ ಶಿಕ್ಷಕ ಬಳಗದ ಋಣವನ್ನ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಇಂದಿಗೂ ನಾನು ಊರಿನೊಂದಿಗೆ ಇಟ್ಟುಕೊಂಡಿರುವ ಒಡನಾಟಕ್ಕೆ ನೀವು ತೋರುತ್ತಾ ಬಂದಿರುವ ಪ್ರೀತಿಯೇ ಸಾಕ್ಷಿ ಎಂದರು.
ಹಿರಿಯ ಸಹಕಾರಿ ಮುಖಂಡ ಗಿರೀಶ್ ಲಕ್ಷಾಣಿ ಮಾತನಾಡಿ, ಎಷ್ಟೋ ರಾಜಕಾರಣಿಗಳು ಎತ್ತರಕ್ಕೆ ಬೆಳೆದಂತೆ ತಮ್ಮ ಊರನ್ನೇ ಮರೆತುಬಿಡುತ್ತಾರೆ. ಆದರೆ ಬಸವರಾಜ ಹೊರಟ್ಟಿ ಅವರೆಲ್ಲರಿಗೂ ಅಪವಾದ ಎನ್ನುವಂತೆ ಇಷ್ಟೊಂದು ಎತ್ತರಕ್ಕೆ ಬೆಳೆದರೂ ಇಂದಿಗೂ ನಮ್ಮೂರಿನ ಜನರ ಒಡನಾಟದಲ್ಲಿ ಇದ್ದಾರೆ. ಊರಿನ ಪ್ರತಿಯೊಂದು ಕೆಲಸ-ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಅವರು ಊರಿಗೆ ಮಾಡಿದ ಉಪಕಾರವನ್ನು ನಾವ್ಯಾರೂ ಮರೆಯುವಂತಿಲ್ಲ. ಅವರನ್ನು ಗೌರವಿಸುವುದು ಎಂದರೆ ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಸ್ವಾಮೀಜಿ, ಭೀಮಪ್ಪ ತಳವಾರ, ರಾಜುಗೌಡ ಪಾಟೀಲ, ಮಿಥುನ ಕನಕರೆಡ್ಡಿ, ಸುವರ್ಣಪ್ಪ ಕೊಣ್ಣೂರ, ಎಂ.ಜಿ. ದಾಸರ, ಪ್ರಕಾಶ ಯರಗಟ್ಟಿ, ತಹಸೀಲ್ದಾರ್ ರಾಜಶೇಖರ ನಾಯಕ, ಡಿಡಿಪಿಐ ಎಚ್.ಜಿ. ಮಿರ್ಜಿ, ಪಿ.ಎನ್. ಕಾಂಬಳೆ, ವಿಜಯಲಕ್ಷ್ಮೀ ಪೆಟ್ಲೂರು, ವಿಜಯಲಕ್ಷ್ಮೀ ಹಸರೆಡ್ಡಿ, ವಿ.ಎಚ್. ಕೊಡಣ್ಣವರ, ವಿದ್ಯಾವತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರತಿವರ್ಷ ಒಬ್ಬ ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ನನ್ನ ತಂದೆಯವರು ಸಹಾಯ ಮಾಡುತ್ತಿದ್ದರು. ನನ್ನ ತಾಯಿ ನಿಮ್ಮ ತಂದೆಯ ಹಾದಿಯಲ್ಲಿ ಸಾಗಬೇಕೆಂದು ಹೇಳುತ್ತಿದ್ದರು. ಅವರ ಮಾತುಗಳಿಂದಾಗಿ ಈ ಹೈಟೆಕ್ ಶಾಲೆ ನಿರ್ಮಾಣಗೊಂಡಿದೆ. ಹುಟ್ಟೂರಿನ ಋಣ ತೀರಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ವಿಶೇಷವಾಗಿ ತಾವು ತೋರಿದ ಪ್ರೀತಿ, ಆದರಗಳು ಹುಟ್ಟಿದ ಊರನ್ನು ಬಿಟ್ಟು ಇರಲಾರದಂತೆ ಮಾಡಿವೆ. ತಾವು ನೀಡಿದ ಸನ್ಮಾನವನ್ನು ಅತ್ಯಂತ ಗೌರವದಿಂದ ಸ್ವೀಕರಿಸುವುದಾಗಿ ಹೊರಟ್ಟಿ ಹೇಳಿದರು.



