ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಾಲಾ ಮಕ್ಕಳಿಗೆ ಬರುವ ರೋಗಗಳನ್ನು ತಡೆಗಟ್ಟಲು ಲಸಿಕೆಗಳನ್ನು ಒದಗಿಸುವುದು ಅತ್ಯಂತ ಅವಶ್ಯಕವಾಗಿದೆ. ಇದು ಮಕ್ಕಳ ಆರೋಗ್ಯವನ್ನು ರಕ್ಷಿಸಲು ಮತ್ತು ರೋಗ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಜಾಲಿಹಾಳ ಹೇಳಿದರು.
ಪಟ್ಟಣದ ಎಸ್ಎವಿ ಬಾಲಕರ ಪ್ರೌಢಶಾಲೆಯ 10ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಲಸಿಕೆಗಳನ್ನು ನೀಡಿ ರೋಗಗಳಿಂದ ರಕ್ಷಿಸುವುದು, ಶಾಲೆಗಳಲ್ಲಿ ರೋಗ ಹರಡುವುದನ್ನು ತಡೆಯುವುದು, ಮಕ್ಕಳ ಆರೋಗ್ಯವನ್ನು ಸುಧಾರಿಸುವುದು, ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡುವುದು, ಸಮುದಾಯದ ಆರೋಗ್ಯವನ್ನು ಸುಧಾರಿಸುವುದು ಈ ಲಸಿಕೆ ವಿತರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಲಸಿಕೆಗಳು ರೋಗಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ವಿಧಾನವಾಗಿದೆ. ಲಸಿಕೆಗಳು ಮಕ್ಕಳನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತವೆ. ರೋಗ ಹರಡುವುದನ್ನು ತಡೆಯುತ್ತವೆ ಮತ್ತು ಸಮುದಾಯದ ಆರೋಗ್ಯವನ್ನು ಸುಧಾರಿಸುತ್ತವೆ. ಆದ್ದರಿಂದ ಮಕ್ಕಳು ಲಸಿಕೆಗಳನ್ನು ಕಡ್ಡಾಯವಾಗಿ ಪಡೆದುಕೊಂಡು ಆರೋಗ್ಯವಾಗಿರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಜ್ಜನ, ಶಿಕ್ಷಕ ಶಿಳ್ಳಿನ, ಪ್ರಾಥಮಿಕ ಸುರಕ್ಷಣಾಧಿಕಾರಿ ಸಂಗೀತಾ ಮುಚಖಂಡಿ, ವಿಜಯಲಕ್ಷ್ಮೀ ಪೊಲೀಸ್ಪಾಟೀಲ, ರಹಿಮತ್ಬಾನು ಶರಬತ್ವಾಲಾ ಉಪಸ್ಥಿತರಿದ್ದರು.



