ವಿಜಯಸಾಕ್ಷಿ ಸುದ್ದಿ, ಗದಗ
ಸರ್ಕಾರದ ಅನ್ನಭಾಗ್ಯದ ಅಕ್ಕಿ ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಆಗುತ್ತಿದೆ. ಮನೆ ಮನೆಯಿಂದ ಕೆಜಿಗೆ 8ರಿಂದ 10 ರೂ. ದರದಲ್ಲಿ ಅಕ್ಕಿ ಸಂಗ್ರಹಿಸಿ, ಖಾಸಗಿ ಗೋದಾಮಿನಲ್ಲಿ ಶೇಖರಿಸಿ, ಹೊರ ರಾಜ್ಯಕ್ಕೆ 10 ಗಾಲಿ ವಾಹನಗಳ ಮುಖಾಂತರ ಸಾಗಿಸುತ್ತಿದ್ದಾರೆ ಎಂದು ಕದಂಬ ಸೈನ್ಯದ ಧಾರವಾಡ ವಿಭಾಗದ ಸಂಚಾಲಕ ಆನಂದ ಗವಳಿ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಅನ್ನಭಾಗ್ಯ ಸಾಗಾಟ ಮಾಡುವವರ ವಿರುದ್ಧ ಕೆಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅತಿ ಹೆಚ್ಚು ಪ್ರಕರಣ ದಾಖಲಾದವರ ಲೆಕ್ಕ ಪತ್ರಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಸುಳ್ಳು ಲೆಕ್ಕಪತ್ರ ಅಥವಾ ನಕಲಿ ಬಿಲ್ಲು ತೋರಿಸಿದ್ದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ದೂರು ಬಂದಲ್ಲಿ ಮಾತ್ರ ಕ್ರಮ ಕೈಗೊಳುತ್ತಾರೆ. ಸ್ವಯಂ ಪ್ರೇರಣೆಯಿಂದ ಯಾವುದೇ ಕಾರ್ಯಾಚರಣೆಗೆ ಇಳಿಯಲು ಹಿಂದೇಟು ಹಾಕುತ್ತಿರುವುದೇಕೆ? ದಂಧೆಕೋರರೊಂದಿಗೆ ಅಧಿಕಾರಿಗಳು ಹೊಂದಾಣೀಕೆ ಮಾಡಿಕೊಂಡಿದ್ದಾರೆಯೇ ಎಂದು ಗವಳಿ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಅನ್ಯಭಾಗ್ಯ ಅಕ್ಕಿ ಸಾಗಾಟ ತಡೆಯುವಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು, ತಪ್ಪಿತಸ್ಥರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.