ಗದಗ:- ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಇಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಆಶ್ರಯದಲ್ಲಿ ನೂತನ ತಾಲೂಕು ಆಸ್ಪತ್ರೆಯ ಅಡಿಗಲ್ಲು ಸಮಾರಂಭ ಜರುಗಿದೆ.
ಈ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಶಾಸಕ ರಾಮಣ್ಣ ಲಮಾಣಿ ಭಾಷಣದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಎಸ್, ಶಿರಹಟ್ಟಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ತಾಲೂಕ ಆಸ್ಪತ್ರೆಯ ಅಡಿಗಲ್ಲು ಸಮಾರಂಭ ಇಂದು ಜರುಗಿದೆ. ಈ ವೇಳೆ ಭಾಷಣ ಮಾಡುವ ಭರದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಎಡವಟ್ಟು ಮಾಡಿಕೊಂಡಿದ್ದಾರೆ.
ನೂತನವಾಗಿ ನಿರ್ಮಾಣಗೊಳ್ಳಲಿರುವ ತಾಲೂಕ ಆಸ್ಪತ್ರೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳುವ ಬದಲು ದುರುಪಯೋಗ ಪಡಿಸಿಕೊಳ್ಳಬೇಕು ಎಂದಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ ತಕ್ಷಣವೇ ಎದ್ದು ಬಂದು ಅದು ದುರುಪಯೋಗ ಅಲ್ಲ, ಸದುಪಯೋಗ ಅನ್ನಿ ಅಂದಾಗ ಮಾಜಿ ಶಾಸಕ ರಾಮಣ್ಣ ಲಮಾಣಿ ಎಚ್ಚೆತ್ತುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದೇ ವೇಳೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, 85 ಲಕ್ಷ ರೂಪಾಯಿ ನೀಡಿ 6 ಎಕರೆ ಜಮೀನು ಖರೀದಿಸಿದ್ದು ಎಂದು ಹೇಳುವ ಬದಲು 85 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದೇವೆ ಎಂದು ರಾಮಣ್ಣ ಲಮಾಣಿ ಹೇಳಿದ್ದಾರೆ.
ಪಕ್ಕದಲ್ಲೇ ಇದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ಎಸ್ ನೀಲಗುಂದ, ಸರ್ ಅದು 85 ಸಾವಿರ ಅಲ್ಲ, 85 ಲಕ್ಷ ಎಂದಾಗ ಪುನಃ ಅದನ್ನು ರಾಮಣ್ಣ ಲಮಾಣಿ ಸರಿಪಡಿಸಿಕೊಂಡಿದ್ದಾರೆ. ಮಾಜಿ ಶಾಸಕ ರಾಮಣ್ಣ ಲಮಾಣಿ ಅವರ ಎಡವಟ್ಟಿಗೆ ಸಾರ್ವಜನಿಕರು ನಕ್ಕು ಸುಮ್ಮನಾದರು.