ವಿಜಯಸಾಕ್ಷಿ ಸುದ್ದಿ, ಅರುಣಾಚಲ ಪ್ರದೇಶ
ಜನರಿಗೆ ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಲಸಿಕೆ ಹಾಕಿಕೊಳ್ಳಲು ಮಾತ್ರ ಮುಂದಾಗುತ್ತಿಲ್ಲ. ಹಲವು ಆತಂಕ ಹಾಗೂ ಭಯದಿಂದ ಲಸಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಜನರನ್ನು ಸೆಳೆಯಲು ಹಲವೆಡೆ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗಾಗಿ ಅಕ್ಕಿ ಆಫರ್ ನೀಡಿ ಜನರಿಗೆ ಲಸಿಕೆ ಹಾಕಿಸುವ ಪ್ರಯತ್ನ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಅರುಣಾಚಲಪ್ರದೇಶದಲ್ಲಿ ಲಸಿಕೆ ಪಡೆದವರಿಗೆ 20 ಕೆಜಿ ಉಚಿತ ಅಕ್ಕಿ ಆಫರ್ ನೀಡಲಾಗಿದೆ. ಇಂದರಿಂದಾಗಿ ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು, ಸಾಲುಗಟ್ಟಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅರುಣಾಚಲ ಪ್ರದೇಶದ ಸುಬನ್ಸಿರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ತಾಶಿ ವಾಂಗ್ ಚುಕ್ ಥೋಂಗ್ಡಾಕ್ ಎಂಬುವವರೇ ಜನರಿಗೆ ಅಕ್ಕಿ ಆಫರ್ ನೀಡಿದವರು. ಅವರು ಲಸಿಕೆ ಹಾಕಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇವರು 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡರೆ, ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ, 80ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಲಸಿಕೆಯ ಕುರಿತು ಹಲವು ಕಿಡಿಗೇಡಿಗಳು ವದಂತಿಗಳನ್ನು ಹರಡಿದ್ದರು. ಹೀಗಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ಜನರಲ್ಲಿನ ಭಯ ದೂರವಾಗಿಸುವ ನಿಟ್ಟಿನಲ್ಲಿ ತಾಶಿವಾಂಗ್ ಅವರು ಲಸಿಕೆ ಹಾಕಿಸಿಕೊಂಡವರಿಗೆ 20 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದ್ದರು. ಇದನ್ನು ಕೇಳಿದ್ದೆ ತಡ, ಜನರು ಸಾಲಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.