ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳು ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ತಿಳಿದಿರಲಿ ಎಂಬ ಸದುದ್ದೇಶದಿಂದ ಶಾಲೆಗಳಲ್ಲಿ ಶಾಲಾ ಸಂಸತ್ತನ್ನು ರಚಿಸಲಾಗುತ್ತದೆ. ಸಂಸತ್ತಿನ ಬಗ್ಗೆ ಈಗಿನಿಂದಲೇ ಅರಿವನ್ನು ಹೊಂದಿರುವುದು ಅವಶ್ಯಕ ಎಂದು ಶ್ರೀ ಸೋಮೇಶ್ವರ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಎಂ.ಬಿ. ರಮಾಣಿ ಹೇಳಿದರು.
ಸಮೀಪದ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಈಚೆಗೆ 2025-26ನೇ ಸಾಲಿನ ಶಾಲಾ ಸಂಸತ್ತನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರರು ನೀಡಿರುವ ಸಂವಿಧಾನವು ನಮಗೆ ಆಡಳಿತ ನಡೆಸಲು ಮೂಲ ಗ್ರಂಥವಾಗಿದೆ. ಈ ಸಂವಿಧಾನದ ಬಗ್ಗೆಯೂ ನಿಮಗೆ ತಿಳುವಳಿಕೆ ಇರಬೇಕೆಂದು ತಿಳಿಸಿದರು.
ಆಡಳಿತ ಮಂಡಳಿಯ ಸದಸ್ಯ ಶ್ರೀಧರ ಕುಲಕರ್ಣಿ ಮಾತನಾಡಿ, ಶಾಲಾ ಸಂಸತ್ತು ನಿಮಗೆ ಉತ್ತಮ ರಾಜಕಾರಣಿಯಾಗಲು ಪ್ರೇರಣೆ ನೀಡುವ ತಳಹದಿಯಾಗಿದೆ. ಇಕೋ ಕ್ಲಬ್, ಆರೋಗ್ಯ ಕ್ಲಬ್ಗಳೂ ಸಹ ಮುಂದೆ ನಿಮ್ಮಲ್ಲಿ ವಿವಿಧ ಜ್ಞಾನವನ್ನು ಬೆಳೆಸಿಕೊಂಡು ಮುನ್ನಡೆಯಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಧಾನ ಮಂತ್ರಿ ಮತ್ತಿತರ ಖಾತೆಗಳ ಮಂತ್ರಿಗಳಾಗಿರುವ ನೀವು ನಿಮ್ಮ ಉತ್ತಮ ಕಾರ್ಯಗಳ ಮೂಲಕ ಅನುಭವವನ್ನು ಪಡೆಯಿರಿ ಎಂದರು.
ಆಡಳಿತ ಮಂಡಳಿ ಸದಸ್ಯ ರಮಜಾನ್ಸಾಬ್ ಘಟ್ಟದ ವೇದಿಕೆಯ ಮೇಲಿದ್ದರು. ಮುಖ್ಯ ಶಿಕ್ಷಕಿ ಟಿ.ಜಿ. ಕಂಬಾಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಸಂಸತ್ತು, ಆರೋಗ್ಯ ಕೂಟ ಮತ್ತು ಇಕೋ ಕ್ಲಬ್ಗಳ ಮಹತ್ವ ಕುರಿತು ತಿಳಿಸಿದರು. ದೈಹಿಕ ಶಿಕ್ಷಕ ಸಿ.ಎಂ. ಗೋದಿ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕ ಪಿ.ಎಚ್. ತಾಂಬೋಟಿ ಸ್ವಾಗತಿಸಿದರು. ಶಿಕ್ಷಕಿ ಆರ್.ಡಿ. ಜಗ್ಗಲ ನಿರೂಪಿಸಿದರೆ, ಆರ್.ಎಸ್. ನೀರಲಗಿ ವಂದಿಸಿದರು. ಶಾಲಾ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.