ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾದಿಂದಾಗಿ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಸ್ವಲ್ಪ ನಿರಾಳತೆ ನೀಡಿದ್ದಾನೆ.
ಮುದ್ರಣ ಕಾಶಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಿಂಚನ ಆರಂಭವಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ನಂತರದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಆರಂಭವಾಗಿದೆ. ಹೀಗಾಗಿ ಬಿಸಿಲಿನಿಂದ ತತ್ತರಿಸಿದ್ದ ಉತ್ತರ ಕರ್ನಾಟಕ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಬೆಳ್ಳಂ ಬೆಳಿಗ್ಗೆಯೇ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಿಯಮದಂತೆ ದಿನ ನಿತ್ಯದ ವಸ್ತುಗಳನ್ನು ಖರೀದಿಸಲು ಸರ್ಕಾರ ಮಧ್ಯಾಹ್ನ 2ರ ವರೆಗೆ ಅವಕಾಶ ನೀಡಿದೆ. ಹೀಗಾಗಿ ಅಷ್ಟರೊಳಗೆ ಎಲ್ಲ ಕೆಲಸ, ಕಾರ್ಯಗಳನ್ನು ಪೂರ್ಣಗೊಳಿಸಬೇಕೆನ್ನುವ ತವಕದಲ್ಲಿ ಸವಾರರು ಮಳೆಯ ನಡುವೆಯೇ ಬೈಕ್ ಸಂಚಾರ ಆರಂಭಿಸಿದ್ದ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿತ್ತು.
ಹೀಗಾಗಿ ರೈತರು ತುಂಬಾ ಸಂತಸದಲ್ಲಿದ್ದಾರೆ. ತಮ್ಮ ಭೂಮಿಗಳನ್ನೆಲ್ಲ ಹದ ಮಾಡಿಕೊಂಡು ಬಿತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಹಲೆವೆಡ ರೈತರು ಬಿತ್ತನೆ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಹೆಸರು, ಶೇಂಗಾ, ಹತ್ತಿ, ಗೋವಿನಜೋಳ, ಈರುಳ್ಳಿ ಬೆಳೆಗಳ ಬಿತ್ತನೆ ಕಾರ್ಯ ಜೋರಾಗಿದೆ. ಸದ್ಯ ಜಿಲ್ಲೆಯಲ್ಲಿ ಈಗಾಗಲೇ ಶೇ.30 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಒಂದೆಡೆ ಜಿಟಿಜಟಿ ಮಳೆರಾಯ ನಗರದ ಜನತೆಗೆ ಕಿರಿಕಿರಿ ಉಂಟು ಮಾಡಿದೆ. ಹಲವೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.