ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಸಂಸ್ಕೃತಿ ಭವ್ಯವಾಗಿದೆ. ಪ್ರತಿಯೊಬ್ಬರಿಗೂ ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಮುಖ್ಯ. ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ನೀಡಬೇಕು. ಜಾತಿ ಮತ್ತು ಬೇಧವಿಲ್ಲದ ಸಂಸ್ಕೃತಿಯನ್ನು ಬಸವಾದಿ ಶಿವಶರಣರು ನೀಡಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2758ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಂಸ್ಕೃತಿ ನಮ್ಮ ಆಚರಣೆಯಲ್ಲಿದೆ. ಹೆಣ್ಣುಮಕ್ಕಳಿಗೂ ಕೂಡ ಆಧ್ಯಾತ್ಮಿಕ ಸಂಸ್ಕೃತಿ ಕಲ್ಪಿಸಿದವರು ಶರಣರು. ಕಾಯಕ, ದಾಸೋಹ, ಸಮಾನತೆಯ ಮಹತ್ವವನ್ನು ವಿಶ್ವಕ್ಕೆ ಸಾರಿದರು. ವಚನ ಸಾಹಿತ್ಯ ಎಲ್ಲರಿಗೂ ಆವಶ್ಯ. ಶರಣ ಸಂಸ್ಕೃತಿಯ ಮೂಲ ಕನ್ನಡ ಭಾಷೆ ಎಂದು ನುಡಿದರು.
ಶ್ರಾವಣ ಮಾಸದ ಅಂಗವಾಗಿ ಧಾರವಾಡದ ಸಂಗೀತ ಕಲಾವಿದೆ ಸುಜಾತಾ ಗುರವ ಅವರು ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ ವಚನವನ್ನು ಹಾಡಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ ಇವರಿಂದ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ಗದುಗಿನ ಗಣ್ಯ ಉದ್ದಿಮೆದಾರರಾದ ಶರಣ ಶರಣಬಸಪ್ಪ ಗುಡಿಮನಿ ಹಾಗೂ ಧರ್ಮಪತ್ನಿ ಸುಜಾತಾ ಇವರನ್ನು ಸನ್ಮಾನಿಸಲಾಯಿತು. ವಚನಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ರೇವಣಸಿದ್ದಯ್ಯ ಮರಿದೇವರಮಠ ನಡೆಸಿಕೊಟ್ಟರು. ಧರ್ಮಗ್ರಂಥಪಠಣವನ್ನು ನಿಶಾಂತ್ ವಿ.ಕಾಲವಾಡ ಹಾಗೂ ದೀಕ್ಷಾ ಎಂ.ಬುಳ್ಳಾ ನಡೆಸಿದರು. ದಾಸೋಹ ಸೇವೆಯನ್ನು ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ಮತ್ತು ಕುಟುಂಬ ವರ್ಗದವರು ಗದಗ ಮತ್ತು ಧಾರವಾಡ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿ.ಎಂ. ಪಾಟೀಲ ಹಾಗೂ ಶರಣೆ ಲಲಿತಾ ಕಾ. ಪಾಟೀಲ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಶಶಿ ಸಾಲಿ ಮಾತನಾಡಿ, ಭಾರತದ ಸಂಸ್ಕೃತಿ ಶರಣ ಸಂಸ್ಕೃತಿ. ಕಾಯಕ ಸಂಸ್ಕೃತಿ. ಸಮಸಮಾಜ ಕಟ್ಟುವ ಸಂಸ್ಕೃತಿಯಾಗಿದೆ. ಎಷ್ಟೆ ವಿದ್ಯಾವಂತರಾಗಿ ಉತ್ತಮ ನೌಕರಿಯಲ್ಲಿ ಇದ್ದರೂ, ವಿದೇಶದಲ್ಲಿದ್ದರೂ, ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳಿಸದೇ ಚೆನ್ನಾಗಿ ನೋಡಿಕೊಳ್ಳುವುದು ನಿಜವಾದ ಸಂಸ್ಕೃತಿ ಎಂದು ಅಭಿಪ್ರಾಯಪಟ್ಟರು.



