ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾನ್ ಮಾನವತಾವಾದಿ, ಶಾಂತಿದೂತ, ಪ್ರವಾದಿ ಮುಹಮ್ಮದ ಪೈಗಂಬರರ ಜನ್ಮದಿನದ ಅಂಗವಾಗಿ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಮುಸ್ಲಿಂ ಸಮಾಜ ಬಾಂಧವರು ಶ್ರದ್ಧಾ-ಭಕ್ತಿ ಮತ್ತು ವಿಜೃಂಭಣೆಯಿಂದ ಆಚರಿಸಿದರು.
ಹೊಸ ಉಡುಗೆ ಧರಿಸಿದ ಮುಸ್ಲಿಂ ಸಮಾಜ ಬಾಂಧವರು ಬೆಳಿಗ್ಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಬಳಿಕ ಪಟ್ಟಣದ ದೂದಪೀರಾಂ ದರ್ಗಾದಿಂದ ಮುಹಮ್ಮದ ಪೈಗಂಬರರ ಭಾವಚಿತ್ರ ಮತ್ತು ಮುಸ್ಲಿಂ ಧರ್ಮದ ಪವಿತ್ರ ಕ್ಷೇತ್ರಗಳ ಚಿತ್ರಗಳನ್ನೊಳಗೊಂಡ ಮೆರವಣಿಗೆ ಮುಖ್ಯ ಬಜಾರ್ ರಸ್ತೆ, ಶಿಗ್ಲಿ ನಾಕಾ, ಗದಗ ನಾಕಾ, ಮೋಮಿನಗಲ್ಲಿ, ಬಳಿಗಾರ ಓಣಿಯ ಮೂಲಕ ಸಾಗಿ ದರ್ಗಾದಲ್ಲಿ ಸಂಪನ್ನಗೊಂಡಿತು.
ಅಂಜುಮನ್-ಎ-ಇಸ್ಲಾಂ ಕಮಿಟಿ, ದರ್ಗಾ ಕಮಿಟಿ ಹಾಗೂ ಹಿರಿಯರು, ಯುವಕರು, ಮಕ್ಕಳು ಸೇರಿ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಹೊಸ ಉಡುಗೆ ತೊಟ್ಟು ಪೈಗಂಬರರ ಗೀತೆಗಳೊಂದಿಗೆ ಧರ್ಮದ ಘೋಷಣೆ ಕೂಗುತ್ತಾ ಹರ್ಷದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ ಮಾತನಾಡಿ, ಮುಹಮ್ಮದ ಪೈಗಂಬರರು ಇಡೀ ಮಾನವ ಕುಲದ ಒಳಿತಿಗಾಗಿ ಶಾಂತಿ, ಸಮಾನತೆಯ ಸಂದೇಶ ಸಾರಿದ್ದಾರೆ. ಸರಳ, ಸಚ್ಚಾರಿತ್ರ್ಯ ಮತ್ತು ತ್ಯಾಗಭರಿತ ಬದುಕು ಸವೆಸಿ ಅವರು `ನನ್ನ ಜೀವನವೇ ನನ್ನ ಸಂದೇಶ’ ಎಂಬಂತೆ ಬದುಕಿ ಮನುಕುಲದಲ್ಲಿ ಚಿರಸ್ಥಾಯಿಯಾಗಿದ್ದಾರೆ. ದೇವನ ಸಂದೇಶವಾಹಕರಾಗಿ ಮಾನವ ಸಮೂಹಕ್ಕೆ ಜ್ಞಾನದ ಬೆಳಕು ಮತ್ತು ಸನ್ಮಾರ್ಗದ ಹಾದಿಯನ್ನು ತೋರಿಸಿದ್ದಾರೆ. ಅವರ ಜೀವನಾದರ್ಶ, ತೋರಿದ ಮಾನವೀಯ ಮೌಲ್ಯಗಳನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತ್ಯುತ್ಸವ ಸಾರ್ಥಕವಾಗುತ್ತದೆ ಎಂರು.
ಮೆರವಣಿಗೆಗೆ ಸಿಪಿಐ ನಾಗರಾಜ ಮಾಡಳ್ಳಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದೂದನಾನಾ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ ಕಣಕೆ, ಪುರಸಭೆ ಉಪಾಧ್ಯಕ್ಷ ಫಿರ್ದೋಸ್ ಆಡೂರ, ಸದಸ್ಯರಾದ ಎಸ್.ಕೆ. ಹವಾಲ್ದಾರ, ಮುಸ್ತಾಕ್ಅಹ್ಮದ್ ಶಿರಹಟ್ಟಿ, ಸಿಕಂದರ ಕಣಕೆ, ಡಿ.ಜೆ. ಮುಚ್ಚಾಲೆ, ವೀರಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ್ ಹವಾಲ್ದಾರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ಕರೀಂ ಸೂರಣಗಿ, ಎನ್.ಎಂ. ಗದಗ, ದಾದಾಪೀರ ತಂಬಾಕದ, ಇಕ್ಬಾಲ್ ಸೂರಣಗಿ, ಜಮೀಲ್ ಸೂರಣಗಿ, ಪೈಮ್ ಪಲ್ಲಿ, ಅಬ್ಜಲ್ ರಿತ್ತಿ ಮತ್ತಿತರರಿದ್ದರು.
ಮೆರವಣಿಗೆಯ ವೇಳೆ ಮುಸ್ಲಿಂ ಬಾಂಧವರು ಜನತೆಗೆ ಸಿಹಿ, ಹಣ್ಣು, ತಂಪು ಪಾನೀಯ ವಿತರಿಸಿದರು. ಹಬ್ಬದ ಅಂಗವಾಗಿ ಪಟ್ಟಣದಲ್ಲಿರುವ ಮಸೀದಿ, ತಮ್ಮ ಅಂಗಡಿ, ಮನೆಗಳಿಗೆ ವಿದ್ಯುತ್ ದೀಪ, ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.