ಬಳ್ಳಾರಿ:- ತನ್ನ ವಿರುದ್ಧ ಸೆಂಥಿಲ್ ಮಾನನಷ್ಟ ಪ್ರಕರಣ ಹೂಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳ ಬುರುಡೆ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯನವರ ಬಳಿ ಮಾತನಾಡಿ ಸಿಬಿಐ, ಎನ್ಐಎಗೆ ಕೊಡಲು ತಿಳಿಸಲಿ ಎಂದು ಸವಾಲ್ ಹಾಕಿದ್ದಾರೆ. ಇಡೀ ವಿಶ್ವಕ್ಕೆ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಎಡಪಂಥೀಯ ಮನಸ್ಥಿತಿ, ನಗರ ನಕ್ಸಲರು ಭಾಗಿಯಾಗಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಲವರು ಧರ್ಮಸ್ಥಳದ ಬಗ್ಗೆ ಭಯದ ವಾತಾವರಣ ಸೃಷ್ಟಿಸಿ ಅಪಪ್ರಚಾರ ಮಾಡಿದರು. ಚಿನ್ನಯ್ಯ, ಸುಜಾತಾ ಭಟ್ ಅವರನ್ನು ಕರೆದುಕೊಂಡು ಬಂದು ಅಪಪ್ರಚಾರ ಮಾಡಲು ಹೊರಟಿದ್ದರು. ಮಾಧ್ಯಮ ಹಾಗೂ ಎಸ್ಐಟಿಯಿಂದ ಈ ವಿಚಾರ ಹೊರಗಡೆ ಬಂದಿದೆ ಎಂದರು. ಈ ಷಡ್ಯಂತ್ರದ ಹಿಂದೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿ ಆಗಿ ಕೆಲಸ ಮಾಡಿದ್ದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎನ್ನುವುದನ್ನು ಹೇಳಿದ್ದು ನಾನು. ಮುಸುಕುಧಾರಿ ಮೂಲವನ್ನು ಹೇಳಿದ್ದು ನಾನು. ಎಡಪಂಥೀಯ ವಿಚಾರಾಧಾರೆಗಳನ್ನ ಇಟ್ಕೊಂಡು ಐಎಎಸ್ ಆಗಿ ಸೆಂಥಿಲ್ ಕೆಲಸ ಮಾಡಿದ್ದಾರೆ ಎಂದು ದೂರಿದರು. ಹಿಂದೂ ಧರ್ಮ, ಸಂಘಪರಿವಾರದ ಬಗ್ಗೆ ಮಾತಾಡುತ್ತಿದ್ದ ಅವರು ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದರು. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅದೇ ಸಸಿಕಾಂತ್ ಸೆಂಥಿಲ್ ಇಂದು ನನ್ನ ಮೇಲೆ ಮಾನನಷ್ಡ ಮೊಕದ್ದಮೆ ಹೂಡಿದ್ದಾರೆ ಎಂದರು.
ಸಸಿಕಾಂತ್ ಸೆಂಥಿಲ್ ಹೂಡಿರುವ ಮಾನನಷ್ಡ ಮೊಕದ್ದಮೆ ಕೇಸ್ ಎದುರಿಸಿಲು ನಾನು ಸಿದ್ಧನಿದ್ದೇನೆ. ಅವರು ಕೋರ್ಟ್, ಲಾ ಬಗ್ಗೆ ಮಾತಾಡ್ತಿದ್ದಾರೆ. ಅವರು ಪಾರ್ಲಿಮೆಂಟ್ ಮೇಂಬರ್ ಇದ್ದಾರೆ. ಮಾನನಷ್ಟ ಮೊಕದ್ದಮೆ ಹಾಕಲಿ, ಅದರ ಜೊತೆಗೆ ಇದನ್ನ ಎನ್ಐಎಗೆ ಕೊಡಲು ಸಿಎಂ ಬಳಿ ಮನವಿ ಮಾಡಲಿ. ಇದರಲ್ಲಿ ನನ್ನ ಪಾತ್ರ ಇಲ್ಲ ಅನ್ನೋದನ್ನ ತೋರಿಸಲಿ. ನಾನು ಬಹಳ ಸ್ಪಷ್ಟವಾಗಿ ಸೆಂಥಿಲ್ ಹೆಸರು ತೆಗೆದುಕೊಂಡೇ ಹೇಳಿದ್ದೇನೆ. ನಾನು ಅದನ್ನ ಲೀಗಲ್ ಆಗಿ ಫೈಟ್ ಮಾಡುತ್ತೇನೆ ಎಂದರು.



