ವಿಜಯಸಾಕ್ಷಿ ಸುದ್ದಿ, ಗದಗ: ಪಂ. ಪುಟ್ಟರಾಜ ಕವಿ ಗವಾಯಿಗಳವರು ಜಗತ್ತಿನ ಕಲ್ಯಾಣಕ್ಕಾಗಿ ಬದುಕಿದವರು. ಅವರನ್ನು ಜಗತ್ತು ಸದಾ ಸ್ಮರಿಸುತ್ತದೆ ಎಂದು ನೀಲಗುಂದ ಶ್ರೀ ಗುದ್ನೇಶ್ವರ ಮಠದ ಪೂಜ್ಯಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ, ಶ್ರೀ ಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ ಯಳವತ್ತಿ ಹಾಗೂ ಯಳವತ್ತಿ ಗ್ರಾಮಸ್ಥರ ಸಹಯೋಗದಲ್ಲಿ ಪರಮಪೂಜ್ಯ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಶಿವಯೋಗಿಗಳವರ 15ನೇ ಪುಣ್ಯಸ್ಮರಣೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಂ. ಪಂಚಾಕ್ಷರಿ ಗವಾಯಿಗಳವರ ಕೃಪೆಯಿಂದ ಪುಟ್ಟರಾಜ ಕವಿ ಗವಾಯಿಗಳು ಅದ್ಭುತ ಲೋಕವನ್ನು ಸೃಷ್ಟಿಸಿದರು. ಗುರುವಿನ ನಿಷ್ಠೆ ಗಟ್ಟಿಯಾದರೆ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬುದಕ್ಕೆ ಪಂ. ಪುಟ್ಟರಾಜ ಕವಿ ಗವಾಯಿಗಳವರ ಗುರುನಿಷ್ಠೆ ಕಾರಣವಾಗಿದೆ ಎಂದು ಹೇಳಿದರು.
ಪಾವನ ಸಾನ್ನಿಧ್ಯ ವಹಿಸಿದ್ದ ಹರ್ಲಾಪುರ ಕೊಟ್ಟೂರೇಶ್ವರ ಶ್ರೀಮಠದ ಪೂಜ್ಯಶ್ರೀ ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಯಳವತ್ತಿ ಗ್ರಾಮದಲ್ಲಿ ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮರಣೋತ್ಸವ ನೆಪದಲ್ಲಿ ಆಧ್ಯಾತ್ಮಿಕ ಚಿಂತನ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಏಳು-ಏಳು ಜನ್ಮದ ಪುಣ್ಯದ ಫಲದಿಂದ ಯಳವತ್ತಿ ಗ್ರಾಮದಲ್ಲಿ ಈ ಕಾರ್ಯಕ್ರಮ ಜರುಗುತ್ತಿದೆ. ನಿಸ್ವಾರ್ಥ ಸೇವೆಗೆ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ಕಲಿತ ವಿದ್ಯಾರ್ಥಿಗಳು ಸಾಕಷ್ಟು ಸಾಧನೆ ಮಾಡುವ ಮೂಲಕ ಉದಯ ಗುರುಗಳ ಹೆಸರನ್ನು ಅಜರಾಮರಗೊಳಿಸಿದ್ದಾರೆ ಎಂದು ಹೇಳಿದರು.
ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಸಂತರ, ಶರಣರ ಪ್ರವಚನ ಆಲಿಸುವುದರಿಂದ ಒತ್ತಡದ ಜೀವನದಲ್ಲಿ ದಣಿದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ. ಬಿತ್ತಿದ ಬೀಜ ಬೆಳೆ ಆಗುವಂತೆ ಪ್ರವಚನದ ಬೀಜ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನಾನು ಕೂಡ ಇದೇ ಗ್ರಾಮದ ಮೊಮ್ಮಗಳಾಗಿದ್ದು, ಇಲ್ಲಿನ ಜನರ ಪ್ರೀತಿ-ವಿಶ್ವಾಸವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗದುಗಿನ ಪಂ. ವೀರೇಶ ಕಿತ್ತೂರ, ಕೊಪ್ಪಳದ ಪಂ. ಸದಾಶಿವ ಪಾಟೀಲ ಹಾಗೂ ಬೆಂಗಳೂರಿನ ಪಂ. ನಾಗಲಿಂಗಯ್ಯ ಗವಾಯಿಗಳಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗ್ರಾ.ಪಂ. ಅಧ್ಯಕ್ಷರಾದ ರೇಷ್ಮಾಬಾನು ಹಳೆಮನೆ, ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ಎಸ್.ಎಚ್. ಶಿವನಗೌಡ್ರ, ಮುದುಕಯ್ಯಸ್ವಾಮಿ ಹಿರೇಮಠ, ಸಮಾಜಸೇವಕ ಉಮೇಶ ಹಡಪದ ಮುಂತಾದವರು ಉಪಸ್ಥಿತರಿದ್ದರು.
ಈರಣ್ಣ ಹತ್ತಿಕಾಳ ಸ್ವಾಗತಿಸಿದರು. ಹರ್ಲಾಪುರದ ಸದಾನಂದ ಶಾಸ್ತ್ರಿಗಳು ಹರ್ತಿಮಠ ಅವರು ಸಭಾ ನಿರೂಪಣೆ ಮಾಡಿದರು. ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಸಿದ್ದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೃಷ್ಟಿ ಭರಮಗೌಡ್ರ ಅವರಿಂದ ಭರತನಾಟ್ಯ ಜರುಗಿತು.
ಐದು ದಿನಗಳವರೆಗೆ ನಡೆದ ಪ್ರವಚನ ಕಾರ್ಯಕ್ರಮದ ಮಂಗಲೋತ್ಸ ಜರುಗಿತು. ಪ್ರವಚನಕಾರರಾಗಿ ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಸಿದ್ದಾಪುರ ನೆರವೇರಿಸಿದರು. ಸಿದ್ದೇಶಕುಮಾರ ತಬಲಾ ಸಾಥ್ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದಲ್ಲಿ ಪ್ರತಿವರ್ಷ ಗುರುಗಳ ಪುಣ್ಯಸ್ಮರಣೋತ್ಸವ ನಡೆಯುತ್ತ ಬಂದಿದೆ. ಅಂತೆಯೇ ಗುರುಗಳ ಜೀವನದ ದರ್ಶನ, ಚಿಂತನೆಗಳನ್ನು ಎಲ್ಲಿ ಹರಡುತ್ತದೆಯೋ ಆ ಕ್ಷೇತ್ರ ಪಾವನವಾಗುತ್ತದೆ ಎಂದು ಹೇಳಿದರು.



