ವಿಜಯಸಾಕ್ಷಿ ಸುದ್ದಿ, ಮೈಸೂರು
ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿರಲಿಲ್ಲ, ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಅಣೆಕಟ್ಟು ಬಿರುಕು ಬಿಟ್ಟಿದೆಯೇ? ಎಂದು ಪ್ರಶ್ನಿಸಿದ್ದೆ, ಆ ವಿಷಯ ಹಲವು ತಿರುವುಗಳನ್ನು ಪಡೆದುಕೊಂಡು ಇಲ್ಲಿಗೆ ಬಂದು ನಿಂತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಮರೀಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೈಸೂರಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಣೆಕಟ್ಟು ಬಿರುಕು ಬಿಟ್ಟಿದೆಯೇ ಇಲ್ಲವೇ ಎಂದು ಹೇಳುವುದು, ನಿರ್ಧರಿಸುವುದು ನಾವ್ಯಾರು ಅಲ್ಲ, ಸಂಬಂಧಪಟ್ಟ ಅಧಿಕಾರಿಗಳು ಪ್ರಮಾಣಪತ್ರ ನೀಡಬೇಕು. ಮಂಡ್ಯ ಜಿಲ್ಲೆಯ ಗಣಿ ಅಧಿಕಾರಿಗಳು ಕೂಡ ಏನೂ ಆಗಿಲ್ಲವೆನ್ನುವಂತೆ ಮಾತನಾಡುತ್ತಾರೆ. ಅವರ ಮೇಲೆಯೂ ಒತ್ತಡಗಳು ಇರಬಹುದು. ಹೀಗಾಗಿ ಸ್ವತಂತ್ರ ತನಿಖೆಯಾಗಬೇಕು ರಾಜ್ಯದ ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ಮಾಡಿಸಲಿ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1200ಕೋಟಿ ನಷ್ಟ ಆಗಿದೆ. ಇಷ್ಟು ರಾಜಧನ ವಸೂಲಿ ಮಾಡಿದರೆ ಮಂಡ್ಯ ಅಭಿವೃದ್ಧಿಗೆ ಬಳಸಬಹುದಿತ್ತು ಎಂದರು.
ಕೆಆರ್ ಎಸ್ ಸುತ್ತಮುತ್ತ ಆತಂಕದ ವಾತಾವರಣ ಇರುವ ಬಗ್ಗೆ ಎಲ್ಲೆಡೆ ವರದಿ ಆಗುತ್ತಿದೆ. ಈಗಾಗಲೇ ನಾನೂ ಕೂಡ ಸಭೆಯಲ್ಲಿ ಬಿರುಕಾಗಿದೆಯಾ ? ಎಂದು ಪ್ರಶ್ನೆ ಮಾಡಿದೆ. ಈಗ ಏನೂ ಆಗಿಲ್ಲವಾದರೆ ಸರಿ. ಹಾಗಂತ ಇನ್ನೂ 10 ವರ್ಷ ಬಳಿಕ ಕೆಆರ್ ಎಸ್ ಡ್ಯಾಂ ಒಡೆದರೆ ಪರವಾಗಿಲ್ವ. 50 ವರ್ಷ ಬಳಿಕವಾದರೂ ಓಕೆನಾ ? ಕೊರೊನಾ ಬರುವ ಮುಂದೆ ಮಾಸ್ಕ್ ಹಾಕೊಳ್ಳಿ, ಸ್ಯಾನಿಟೈಸ್ ಮಾಡ್ಕೊಳಿ ಅಂತ ಹೇಳ್ತಿವಿ. ಹಾಗಂತ ನಮಗೆ ಕೊರೊನಾ ಬಂದಿದೆ ಎಂದು ತಿಳಿದುಕೊಳ್ಳಲು ಆಗುತ್ತಾ ಎಂದು ಸುಮಲತಾ ತಿರುಗೇಟು ನೀಡಿದರು.