ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನವರಾತ್ರಿ ಹಬ್ಬ ಬಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ. ಹಬ್ಬದ ಅಂಗವಾಗಿ ನರೇಗಲ್ಲ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮಹಿಳೆಯರು, ಯುವತಿಯರು, ಮಕ್ಕಳು ಬನ್ನಿ ವೃಕ್ಷಕ್ಕೆ ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತಾಚರಣೆಯ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಈ ವರ್ಷವೂ ನರೇಗಲ್ಲ ಹೋಬಳಿಯಾದ್ಯಂತ ಅಲ್ಲಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು, ಮಕ್ಕಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಬನ್ನಿ ಮಹಾಂಕಾಳಿ ವೃಕ್ಷಕ್ಕೆ ಭಕ್ತಿಪೂರ್ವಕವಾಗಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಸೂರ್ಯೋದಯಕ್ಕೂ ಮುಂಚಿತವಾಗಿ ಮೌನವಾಗಿ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸುವುದು ಕಂಡುಬಂದಿತು. ಮಕ್ಕಳು ವಿದ್ಯೆ ಕರುಣಿಸಲೆಂದು, ಗೃಹಿಣೆಯರು ತಮ್ಮ ಸಂಸಾರ ಚೆನ್ನಾಗಿರಲಿ ಎಂದು ಹಾಗೂ ಯುವತಿಯರು ಕಂಕಣಭಾಗ್ಯ ದೊರೆತು ಉತ್ತಮ ಜೀವನ ಸಿಗಲಿ ಎಂದು ಬೇಡಿಕೊಂಡು ಪ್ರಾರ್ಥಿಸಿದರು.
ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತ ಆಚರಿಸಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುವುದರಿಂದ ನಮ್ಮ ಕಷ್ಟಗಳು ಬಹು ಬೇಗ ನಿವಾರಣೆಯಾಗುತ್ತವೆ ಎಂಬ ಬಲವಾದ ನಂಬಿಕೆ ಇಲ್ಲಿನ ಮಹಿಳೆಯರದ್ದಾಗಿದೆ. ಈ ವೃತಾಚರಣೆಯಿಂದ ಗ್ರಾಮದ ಹಲವಾರು ಕುಟುಂಬದವರಿಗೆ ಸುಖ, ಶಾಂತಿ, ನೆಮ್ಮದಿಯ ಜೀವನ ಪ್ರಾಪ್ತಿಯಾಗಿದೆ ಎಂದು ಹೊಸಪೇಟಿ ಓಣಿಯ ನಿವಾಸಿ ರೇಖಾ ಪಾಯಪ್ಪಗೌಡ್ರ ಅಭಿಪ್ರಾಯಪಟ್ಟರು.



