ವಿಜಯಸಾಕ್ಷಿ ಸುದ್ದಿ, ಲಕ್ಷ್ಮೀಶ್ವರ: ಪಟ್ಟಣದ ಕಲಾಂ ನಗರದ ಹತ್ತಿರವಿರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ವಿದ್ಯಾಸಂಸ್ಥೆಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯ ಬಳಿ ಚರಂಡಿ ನೀರು ತುಂಬಿಕೊಳ್ಳುತ್ತಿದ್ದು, ಪುರಸಭೆ ಇದರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವದಕ್ಕೆ ಅಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಅಲ್ಕೋಡ್, ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಮುಂಜಾನೆ ಪುರಸಭೆಗೆ ಆಗಮಿಸಿದ ಹನುಮಂತಪ್ಪ ಅಲ್ಕೋಡ್, ಕಳೆದ 3-4 ವರ್ಷಗಳಿಂದ ಇಲ್ಲಿ ಚರಂಡಿ ನೀರು ಶಾಲೆಯ ಆವರಣಕ್ಕೆ ನುಗ್ಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದರ ವಾಸನೆಯಿಂದ ಮಕ್ಕಳು ಊಟ ಮಾಡಲು ಸಹ ಹಿಂಜರಿಯುವಂತಾಗಿದೆ. ಈ ಗಲೀಜು ನೀರಿನಿಂದ ಶಾಲೆಯ ಮಕ್ಕಳಿಗೆ, ಶಿಕ್ಷಕರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಕುರಿತಂತೆ ಪುರಸಭೆಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ವಾತಾವರಣ ಇರಬೇಕು ಎನ್ನುವದು ಸರಕಾರದ ಇಚ್ಛೆಯಾಗಿದ್ದರೂ ಅದನ್ನು ಇಲ್ಲಿ ಸಂಪೂರ್ಣವಾಗಿ ಧಿಕ್ಕರಿಸಲಾಗಿದೆ. ಇಲ್ಲಿನ ಚರಂಡಿ ನಿರ್ಮಾಣ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ನೀರು ಹರಿದು ಹೋಗುವ ಮಾರ್ಗವನ್ನೇ ಸರಿಯಾಗಿ ನಿರ್ಮಿಸಿಲ್ಲ. ಸುತ್ತಮುತ್ತಲಿನಿಂದ ಚರಂಡಿ ನೀರು ಅಪಾರ ಪ್ರಮಾಣದಲ್ಲಿ ಹರಿದು ಬಂದು ಶಾಲೆಯ ಆವರಣದೊಳಗೆ ನುಗ್ಗುತ್ತಿದೆ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕೆಂಬ ನಿರ್ದೇಶನವಿದೆ. ಆದರೆ ಹಿಂದುಳಿದ ವರ್ಗಗಳ ಸಂಸ್ಥೆಯ ಶಾಲೆ ಇದಾಗಿದ್ದು, ಅದೇ ಉದ್ದೇಶದಿಂದ ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಇಂಜಿನಿಯರ್ ಕಾಟೇವಾಲೆ ಹಾಗೂ ಸಿಬ್ಬಂದಿಗಳು ಮಾಜಿ ಸಚಿವರೊಂದಿಗೆ ಜಾಗೆಗೆ ತೆರಳಿ ಜೆಸಿಬಿ ಮೂಲಕ ನೀರು ಹರಿದುಹೋಗುವ ಮಾರ್ಗ ತೆರವುಗೊಳಿಸುವ ಕಾರ್ಯ ಮಾಡಿದರು. ಹೀಗೆ ತಾತ್ಕಾಲಿಕ ಉಪಶಮನ ಮಾಡುವ ಕಾರ್ಯ ಮಾಡುವದು ಬೇಡ. ಇದಕ್ಕೆ ಖಾಯಂ ಆಗಿ ಕೆಲಸ ಮಾಡುವಂತೆ ಹೇಳಿದರು. ಅದನ್ನು ಆದಷ್ಟು ಶೀಘ್ರ ಸರಿಪಡಿಸುವದಾಗಿ ಅಧಿಕಾರಿಗಳು ಮಾಜಿ ಸಚಿವರಿಗೆ ಭರವಸೆ ನೀಡಿದರು. ಈ ವೇಳೆ ಜಾಕೀರಹುಸೇನ್ ಹವಾಲ್ದಾರ ಇದ್ದರು.
ಈ ಕುರಿತಂತೆ ಪುರಸಭೆಗೆ ಸಲ್ಲಿಸಿದ ಅನೇಕ ಮನವಿಗಳಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಈ ಹಿಂದೆ ಗದಗ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇದನ್ನು ಕೂಡಲೇ ಸರಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವದು ಜಿಲ್ಲಾಧಿಕಾರಿಗಳ ಆದೇಶವನ್ನು ತಿರಸ್ಕರಿಸಿದಂತಾಗಿದೆ. ಯಾವುದೇ ಕಾರಣಕ್ಕೂ ಅಲ್ಲಿನ ಸಮಸ್ಯೆ ಬಗೆಹರಿಸದ ಹೊರತು ಜಾಗ ಬಿಟ್ಟು ಕದಲುವದಿಲ್ಲ ಎಂದು ಹನುಮಂತಪ್ಪ ಅಲ್ಕೋಡ್ ಪಟ್ಟು ಹಿಡಿದರು.



