ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೀಪಾವಳಿ ಪಾಡ್ಯದ ದಿನವಾದ ಬುಧವಾರ ಸಂಜೆ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ರಥೋತ್ಸವವನ್ನು ಸಂಪ್ರದಾಯದಂತೆ ಸಡಗರ, ಸಂಭ್ರಮ ಮತ್ತು ಶ್ರದ್ಧಾ-ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ, ಹನುಮಂತ ದೇವರ ಮೂರ್ತಿಯನ್ನು ಬೆಣ್ಣೆ ಮತ್ತು ವಿಳ್ಯದೆಲೆಯಿಂದ ಅಲಂಕರಿಸಲಾಗಿತ್ತು. ಸಂಜೆ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಈ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಜಾತ್ರೆಯ ರಂಗು ಮುಗಿಲೇರಿದೆ.
ರಥೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಹೂವಿನಶಿಗ್ಲಿ ಶ್ರೀಗಳು, ಅಜ್ಞಾನ, ಅಂಧಕಾರ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದು ದೀಪಾವಳಿ ಹಬ್ಬದ ವೈಶಿಷ್ಟ್ಯವಾಗಿದೆ. ದೀಪವು ಧರ್ಮ, ಸಂಸ್ಕೃತಿ, ಜ್ಞಾನ ಮತ್ತು ಆಧ್ಯಾತ್ಮದ ಸಂಕೇತವಾಗಿ, ದೀಪ ಬೆಳಗಿದಂತೆ ಎಲ್ಲರ ಜೀವನದಲ್ಲಿ ಬೆಳಕು ಪ್ರಜ್ವಲಿಸಬೇಕು. ಸಮಾಜದಲ್ಲಿ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಕೆಲಸ ಮಾಡಬೇಕೇ ಹೊರತು ಕತ್ತಲೆಗೆ ತಳ್ಳುವ ಕಾರ್ಯವನ್ನು ಮಾಡಬಾರದು. ಜಾತ್ರೆ, ಹಬ್ಬ-ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರತಿಯೊಂದು ಹಬ್ಬಕ್ಕೂ ಧಾರ್ಮಿಕ ಹಿನ್ನೆಲೆ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಹಾವಳಿ ಹನುಮಂತ ದೇವರು ವಿಶೇಷ ಶಕ್ತಿ ಹೊಂದಿದ ಜಾಗೃತ ದೇವರಾಗಿದ್ದು, ಇಲ್ಲಿನ ಭಕ್ತರು ಹಮ್ಮಿಕೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದು ನುಡಿದರು.
ಶಾಸಕ ಡಾ. ಚಂದ್ರು ಲಮಾಣಿ, ಈಶ್ವರಪ್ಪ ಕುಂಬಾರ, ನೀಲಪ್ಪ ಕರ್ಜೇಕಣ್ಣವರ, ನಾಗರಾಜ ಚಿಂಚಲಿ, ನಿಂಗಪ್ಪ ಬನ್ನಿ, ಮಹೇಶ ಹೊಗೆಸೊಪ್ಪಿನ, ಸುನೀಲ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ಫಕ್ಕೀರೇಶ ಅಣ್ಣಿಗೇರಿ, ಸುನೀಲ ಮುಳಗುಂದ, ಮಲ್ಲಿಕಾರ್ಜುನ ಮುಳಗುಂದ, ಶೇಖಪ್ಪ ಕರ್ಜೇಕಣ್ಣವರ, ಮಾಂತೇಶ ಗೋಡಿ, ನವೀನ ಕುಂಬಾರ, ಮಲ್ಲಪ್ಪ ಚಕ್ರಸಾಲಿ, ಬಸವರಾಜ ಚಕ್ರಸಾಲಿ, ಮಂಜುನಾಥ ಕೊಡಳ್ಳಿ, ಜಗದೀಶ ಕುಂಬಾರ, ಈರಣ್ಣ ಪೂಜಾರ, ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ, ಭರಮಪ್ಪ ಅಣ್ಣಿಗೇರಿ ಹಾಗೂ ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ, ಹಾವಳಿ ಆಂಜನೇಯ ಭಜನಾ ಮಂಡಳಿ, ಯುವಕ ಮಂಡಳಿ ಸದಸ್ಯರು, ಹಿರಿಯರು, ಮುಖಂಡರು ಪಾಲ್ಗೊಂಡಿದ್ದರು.