- ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಹೇಳಿಕೆ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಯಡಿಯೂರಪ್ಪ ಪದತ್ಯಾಗದಿಂದ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯದವರು ಬೇಸರದಲ್ಲಿದ್ದರು. ಅದನ್ನು ಸರಿದೂಗಿಸಲು ಅದೇ ಸಮುದಾಯದ ನಾಯಕನನ್ನು ಸಿಎಂ ಮಾಡಿರುವುದು ಸ್ವಾಗತಾರ್ಹ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ನಾಲ್ಕೈದು ಜನರ ಹೆಸರು ಕೇಳಿ ಬಂದಿದ್ದವಾದರೂ ಬಸವರಾಜ ಬೊಮ್ಮಾಯಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು, ಬಿಜೆಪಿಯ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿ ಎಂದರು.
ಬಸವರಾಜ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳಿಲ್ಲ. ಹೀಗಾಗಿ, ಬಿಜೆಪಿಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ. ಯಡಿಯೂರಪ್ಪ ಅವರ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇವೆ ಎಂದರು.
ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ.
ಇದರ ಕಡೆ ಬೊಮ್ಮಾಯಿ ಹೆಚ್ಚಿನ ಮುತುವರ್ಜಿ ವಹಿಸಿವ ಉ.ಕ. ಭಾಗದ ಅಭಿವೃದ್ಧಿಗಳು ಕಾರ್ಯ ಕುಂಠಿತವಾಗಿದ್ದು, ಅವುಗಳಿಗೆ ವೇಗ ತರಬೇಕು. ಈ ಭಾಗದ ರೈತ ಸಮುದಾಯಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾತಿ-ಮತ-ವರ್ಗಗಳನ್ನು ಮರೆತು ಕೆಲಸ ಮಾಡಬೇಕು ಎಂದರು.
ಈವರೆಗೂ ಬಿಜೆಪಿಯಲ್ಲಿ ಗುಂಪುಗಳಾಗಿ ಕೆಲಸ ಮಾಡುತ್ತಿದ್ದರು. ಸಿಎಂ ಬೊಮ್ಮಾಯಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಬಿಎಸ್ವೈ ದೂರದೃಷ್ಟಿ, ಸಂಕಲ್ಪ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಎಂದರು.