ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಂತಾಗಿದ್ದಾರೆ. ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳು ಬಿಜೆಪಿ ಕಾರ್ಯಾಲಯಗಳಾಗಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ದೂರಿದರು.
ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ಮಾಡ್ತಿದೆ ಅಂತ ಬಿಜೆಪಿಯವರು ಮಾತನಾಡುತ್ತಿದ್ದರು. ಸಲಹೆ ಕೊಡುತ್ತಿದ್ದ ಬಿಜೆಪಿ ಮುಖಂಡರು ಈಗ ಎಲ್ಲಿ ಕಾಣೆಯಾಗಿದ್ದಾರೋ ಗೊತ್ತಿಲ್ಲ. ಮೊಟ್ಟೆಯಲ್ಲೂ ದುಡ್ಡು ಮಾಡಲು ಹೊರಟಿರುವುದು ಖೇದಕರ ಸಂಗತಿ. ಇದರ ಬಗ್ಗೆ ಏನು ಹೇಳುತ್ತಾರೆ ಬಿಜೆಪಿ ಮುಖಂಡರು ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಯಾವ ಮಟ್ಟಿಗೆ ಮಾಡ್ತಾರೆ ಎನ್ನಲು ಇದು ಎರಡನೇ ಉದಾಹರಣೆ. ಕನಕಗಿರಿಯಲ್ಲಿ ಶೂ, ಸಾಕ್ಸ್ ಭ್ರಷ್ಟಾಚಾರ ಮೊದಲನೆಯದ್ದು. ಜೊಲ್ಲೆಯವರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಕ್ರಮದ ಬಗ್ಗೆ ಬಿಜೆಪಿ ನಾಯಕರು ಮಾತನಾಡ್ತಿಲ್ಲ. ನೂತನ ಸಿಎಂ ಬೊಮ್ಮಾಯಿಯವರು ಜೊಲ್ಲೆಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ತಂಗಡಗಿ ಆಗ್ರಹಿಸಿದರು.
ಕಡ್ಡಾಯ ರಜೆ ಮೇಲೆ ಇದ್ದ ಪೊಲೀಸ್ ಅಧಿಕಾರಿಗಳನ್ನು ಮತ್ತೇ ಅದೇ ಹುದ್ದೆಗೆ ನಿಯೋಜಿಸಿರುವುದನ್ನು ನೋಡಿದರೆ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ. ಇದು ನಾಚಿಕೆಗೇಡಿತನ. ಈ ಕುರಿತು ಸಿಎಂಗೆ ಪತ್ರ ಬರೀತಿನಿ. ಮರಳು ಅಕ್ರಮ ದಂಧೆ ಮೇಲೆ ದಾಳಿಯಾಗಿದ್ದು ಪೊಲೀಸ್ ಅಧಿಕಾರಿಗಳು ಕಡ್ಡಾಯ ರಜೆ ಹೋದ ತಕ್ಷಣ. ಜಿಲ್ಲೆಯಲ್ಲಿ ಕಾನೂನೇ ಇಲ್ಲ. ಅಂಧೇರಿ ದರ್ಬಾರ್ ನಡೆದಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.
2022ರಲ್ಲಿ ಚುನಾವಣೆ ಸಾಧ್ಯತೆ: ತನಿಖೆ ಅನ್ನೋದು ಬರೀ ಬಾಯಿ ಮೂಲಕ ನಡೀತಾ ಇದೆ. ಶಿವರಾಜ ತಂಗಡಗಿಗೆ ಭಯ ಅನ್ನೋದೇ ಗೊತ್ತಿಲ್ಲ. ಯಾರ ಬೇಕಾದರೂ ಎಲೆಕ್ಷನ್ಗೆ ನಿಲ್ಲಲಿ. ಮತ ಹಾಕುವವರು ಜನ. ಜನ ತೀರ್ಮಾನ ಮಾಡ್ತಾರೆ. ನಮ್ಮ ಪಕ್ಷದ ಹಿರಿಯರು ಹೇಳಿದಾರೆ. ಈ ಸರಕಾರ ಬಹಳ ದಿನ ನಿಲ್ಲಲ್ಲ. 2022ರಲ್ಲಿ ಚುನಾವಣೆ ಸನ್ನೀಹಿತವಾಗುವ ಸಾಧ್ಯತೆ ಇದೆ. ಬೊಮ್ಮಾಯಿಯವರು ಉತ್ತಮ ಆಡಳಿತಗಾರರು. ಆಡಳಿತ ನಡೆಸಲು ಬಿಜೆಪಿಯವರೇ ಬಿಡಲ್ಲ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆ ಬಹಳಷ್ಟು ಇದೆ. ವಾರ-ಹತ್ತು ದಿನಗಳವರೆಗೆ ಗಡುವು ಕೊಟ್ಟು ಕಾದು ನೋಡ್ತಿವಿ. ಕೊರತೆ ನಿವಾರಿಸದಿದ್ದರೆ ಖಂಡಿತವಾಗಿ ಬೀದಿಗಿಳಿದು ಹೋರಾಟ ನಿಶ್ಚಿತ ಎಂದು ಅವರು ಎಚ್ಚರಿಸಿದರು.