ನವದೆಹಲಿ: ಅಂಬಾಲಾ ವಾಯುನೆಲೆಯಿಂದ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಾರಾಟ ನಡೆಸಿದ್ದಾರೆ. ವಾಯುಪಡೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಐದು ತಿಂಗಳ ಹಿಂದೆ, ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ ನಡೆಸಿತು. ಇದೇ ವಾಯುನೆಲೆಯಿಂದ ರಫೇಲ್ಗಳು ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವ ಕಾರ್ಯಾಚರಣೆ ನಡೆಸಿದ್ದವು. ಆ ಮೂಲಕ ಭಾರತವು ಭಯೋತ್ಪಾದನಾ ವಿರೋಧಿ ಸಂದೇಶ ರವಾನಿಸಿತ್ತು. ಮುರ್ಮು ಅವರು ಯುದ್ಧ ವಿಮಾನದಲ್ಲಿ ನಡೆಸುತ್ತಿರುವ ಎರಡನೇ ಹಾರಾಟ ಇದು.
ಭಾರತದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ 2023ರ ಏಪ್ರಿಲ್ 8 ರಂದು ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್ನಲ್ಲಿ ಮುರ್ಮು ಹಾರಾಟ ನಡೆಸಿದ್ದರು. ಹೀಗೆ ಹಾರಾಟ ನಡೆಸಿದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು.


