ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರ ವ್ಯಾಪ್ತಿಯಲ್ಲಿ ಬರುವ ನವನಗರ ಸ್ಲಂ ಪ್ರದೇಶದ ರಿ.ಸ. ನಂ 594 ಆಸ್ತಿಯಲ್ಲಿ ಸುಮಾರು 78ಕ್ಕೂ ಹೆಚ್ಚು ಬಡವರು, ಕೂಲಿ ಕಾರ್ಮಿಕರು ಸುಮಾರು 25 ವರ್ಷಗಳಿಂದ ವಾಸವಾಗಿದ್ದಾರೆ. ಈ ಹಿಂದೆ ಸ್ಥಳೀಯ ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿರುವ ಭೂ ಮಾಲಿಕ ಬಡ ಜನರನ್ನು ಒಕ್ಕಲೆಬ್ಬಿಸುವ ಕುತಂತ್ರ ನಡೆಸುತ್ತಿರುವುದನ್ನು ಖಂಡಿಸಿ, ಬಡ ಜನರಿಗೆ ಪದೇ-ಪದೇ ತೊಂದರೆ ನೀಡುತ್ತಿರುವ ಭೂ ಮಾಲಿಕನ ಬಂಧನಕ್ಕೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ:21, ರಹಮತ್ ನಗರ ಹತ್ತಿರ, ಗಂಗಿಮಡಿ ಮುಖ್ಯ ರಸ್ತೆಯಲ್ಲಿರುವ ನವನಗರ ಸ್ಲಂ ಪ್ರದೇಶದ ರಿ.ಸ. ನಂ 594ರಲ್ಲಿಯ 2 ಎಕರೆ 39 ಗುಂಟೆ ಜಾಗೆಯಲ್ಲಿ ಭೂ ಮಾಲಿಕ ದತ್ತಾತ್ರೇಯ ಭಾಂಡಗೆ ಎಂಬುವನು 1999-2000, 2001 ಹಾಗೂ 2009ರಲ್ಲಿ ಗದಗ-ಬೆಟಗೇರಿ ನಗರದ ಬಡ ಹಾಗೂ ಕೂಲಿ ಕಾರು ಕುಟುಂಬಗಳಿಗೆ ಸುಮಾರು 78 ನಿವೇಶನಗಳನ್ನು ಮಾರಾಟ ಮಾಡಿರುತ್ತಾನೆ.
ಆದರೆ ಇದೀಗ, ಭೂ ಮಾಲಿಕ ಸ್ಥಳೀಯ ಪ್ರದೇಶದಲ್ಲಿ ನಿರ್ಮಿಸಲಾದ ಮನೆಗಳನ್ನು ತೆರವುಗೊಳಿಸುತ್ತೇನೆ, ಈ ಜಾಗ ಬಿಟ್ಟು ಹೋಗಿ ಎಂದು ಪದೇಪದೇ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಕೂಡಲೇ ಭೂ ಮಾಲಿಕನನ್ನು ಬಂಧಿಸಿ ಸ್ಲಂ ಜನರಿಗೆ ನ್ಯಾಯ ಕೊಡಬೇಕೆಂದು ಒತ್ತಾಯಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮೆಹಬೂಬಸಾಬ ಬಳ್ಳಾರಿ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ವೆಂಕಟೇಶ ಬಿಂಕದಕಟ್ಟಿ, ಬಸವರಾಜ ಕಳಸದ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಕಸ್ತೂರಿ ಹಳ್ಳಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಶೇಖಪ್ಪ ಶೆಗಣಿ, ಗಿರಜವ್ವ ಬನ್ನಿಮರದ, ಗೌಸಸಾಬ ಅಕ್ಕಿ, ಮಹ್ಮದ ಗಡಾದ, ರಿಜ್ವಾನ ಮುಲ್ಲಾ, ಸೈಯದ ಅಲ್ತಾಫ, ಮೆಹಬೂಬ ಮುಲ್ಲಾ, ಸಂಜು ಗದಗ, ರಾಜಪ್ಪ ಗೌಳಿ, ರಿಯಾಜ ಪಾಮಡಿ, ಜಂದಿಸಾಬ ಢಾಲಾಯತ ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮೋಹನ ಭಜಂತ್ರಿ ವಕೀಲರು ಮಾತನಾಡಿ, ನವನಗರ ಸ್ಲಂ ಪ್ರದೇಶದ ಕುಟುಂಬಗಳು ಭೂ ಮಾಲಿಕ ದತ್ತಾತ್ರೇಯ ಭಾಂಡಗೆ ಹತ್ತಿರ ನಿವೇಶನಗಳನ್ನು ಪಡೆದಿರುವ ದಾಖಲೆಗಳು, ಸ್ಥಳೀಯವಾಗಿ ವಾಸಿಸುತ್ತಿರುವ ದಾಖಲೆಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳ ಮನೆ ಮಂಜೂರಾತಿ ಪತ್ರಗಳು, ವಿದ್ಯುತ್ ಬಿಲ್ಗಳು ಸೇರಿದಂತೆ ಹಲವಾರು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಬಡವರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಜನರಿಗೆ ಅವರ ಕನಸಿನ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿ ಭೂ ಮಾಲಿಕನನ್ನು ಬಂಧಿಸಬೇಕೆಂದು ಆಗ್ರಹಿಸಿದರು.



