ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಾಲಕರ, ಶಿಕ್ಷಕರ ಹಾಗೂ ಗ್ರಾಮದ ಗಣ್ಯರ ಜವಾಬ್ದಾರಿ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಸರಕಾರ ನೀಡುವ ಪ್ರತಿಯೊಂದು ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಿಕ್ಷಕಿ ಕೀರ್ತಿ ಮ್ಯಾಗೇರಿ ಹೇಳಿದರು.
ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೋಷಕ-ಶಿಕ್ಷಕರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಠ್ಯ-ಪುಸ್ತಕ, ಬಿಸಿಯೂಟ, ಪೌಷ್ಠಿಕ ಆಹಾರ, ಸಮವಸ್ತ್ರ, ಶೂ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಶಾಲಾ ಅಭಿವೃದ್ಧಿಗಾಗಿ ಗ್ರಾಮಸ್ಥರ, ಜನಪ್ರತಿನಿಧಿಗಳ ಸಹಾಯ-ಸಹಕಾರ ಅವಶ್ಯವಾಗಿದೆ ಎಂದರು.
ಜಿ.ಇ. ಹಿರೇಮಠ ಮಾತನಾಡಿ, ಪೋಕ್ಸೋ ಕಾಯ್ದೆ, ಬಾಲ ಕಾರ್ಮಿಕ ನಿಷೇಧ, ಮಕ್ಕಳ ಹಕ್ಕುಗಳ ನೀತಿ, ಬಾಲ್ಯ ವಿವಾಹ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವೈಷ್ಣವಿ ಪೂಜಾರ, ದೀಪಾ ಮಧುಕರ ಹಾಗೂ 200 ಮೀ ಮತ್ತು 1500 ಮೀ ಓಟದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಯ ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಹನಾ ಬೇಗಂ ಗುಡಗೇರಿ, ಹುಲಿಗೆಮ್ಮ ಗಾಜಿ ಅವರನ್ನು ಸನ್ಮಾನಿಸಲಾಯಿತು. ಈ ವಿದ್ಯಾರ್ಥಿಗಳಿಗೆ ಶಿಕ್ಷಕ ಜೆ.ವಿ. ಹಿರೇಮಠ ತಲಾ ಒಂದು ಸಾವಿರ ರೂ ಪ್ರೋತ್ಸಾಹಧನ ನೀಡಿದರು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಗ್ರಾ.ಪಂ ಸದಸ್ಯ ಕುಬೇರಪ್ಪ ಬೆಂತೂರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ವೈ.ಎಚ್. ತೆಕ್ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರಮಜನಾಸಾಬ ತಹಸೀಲ್ದಾರ ವೇದಿಕೆಯಲ್ಲಿದ್ದರು. ಶಿಕ್ಷಕ ಜೆ.ವಿ. ಹಿರೇಮಠ ಸ್ವಾಗತಿಸಿದರು. ಹಿರಿಯ ಶಿಕ್ಷಕ ಎಸ್.ಎಚ್. ಶೆಟ್ಟಿನಾಯಕ ನಿರೂಪಿಸಿದರು. ಚಿತ್ರಕಲಾ ಶಿಕ್ಷಕಿ ಎಸ್.ಎ. ಮುಂಡೇವಾಡೆ ವಂದಿಸಿದರು.



