ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕಳೆದ ಮೂರು ದಿನಗಳಿಂದ ಇಲ್ಲಿಯ ವಿದ್ಯಾಶಂಕರ ದೇವಸ್ಥಾನದಲ್ಲಿ ನಡೆದ ಯೋಗಿರಾಜ ಮಹಾರಾಜರ ಪುಣ್ಯಾರಾಧನೆ ಕಾರ್ಯಕ್ರಮವು ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ ಕಾಕಡಾರತಿಯೊಂದಿಗೆ ವಿದ್ಯಾಶಂಕರ, ಯೋಗಿರಾಜರ ಮೂರ್ತಿಗೆ ಲಘು ಅಭಿಷೇಕ ಜರುಗಿತು. ನಂತರ ಭಕ್ತ ಮಂಡಳಿಯು ಗ್ರಾಮದ ಬ್ರಾಹ್ಮಣರ ಮನೆಗೆ ತೆರಳಿ ಭೀಮಭಿಕ್ಷೆಯನ್ನು ನಡೆಸಿದರು. ನಂತರ ಸತ್ಯನಾರಾಯಣ ಪೂಜೆ ನೆರವೇರಿತು.
ಯೋಗಿರಾಜರ ಭಾವಚಿತ್ರವನ್ನು ಪಾಲಕಿಯಲ್ಲಿ ಅವಭೃತ ಸ್ನಾನದೊಂದಿಗೆ ವಿದ್ಯಾಶಂಕರ ದೇಗುಲಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಸಾಲಾಗಿ ಮಲಗಿ ತಮ್ಮ ಭಕ್ತಿಯ ಸಂಕಲ್ಪವನ್ನು ಸಮರ್ಪಿಸಿಕೊಂಡ ಭಕ್ತರನ್ನು ದಾಟಿ ಪಾಲಕಿಯು ಗರ್ಭಗುಡಿಯನ್ನು ಪ್ರವೇಶಿಸಿತು.
ನರೇಗಲ್ಲದ ವೆಂಕಟೇಶ ಕುಲಕರ್ಣಿ, ಹುಬ್ಬಳ್ಳಿಯ ಆಕಾಶವಾಣಿ ಕಲಾವಿದ ಎಸ್.ಆರ್. ಅಂಬೇಕರ್ ಅವರ ಭಕ್ತಿ ಸಂಗೀತ ಕಾರ್ಯಕ್ರಮವು ಮನ ಸೆಳೆಯಿತು. ಇವರಿಗೆ ಮಾಲತಿ ಕುಲಕರ್ಣಿ, ಉಮೇಶ ಪಾಟೀಲ ಅವರು ಸಂಗೀತ ಸೇವೆ ನೀಡಿದರು. ವಿಶ್ವನಾಥ ಕುಲಕರ್ಣಿಯವರ ರಾಜ ನೀತಿಯ ಕುರಿತ ಗಮಕ ವಾಚನವು ಮನ ತಣಿಸಿತು. ಇದಕ್ಕೂ ಪೂರ್ವ ಗದಗ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯಿಂದ ಕೋಲಾಟ, ಭಜನೆ ನಡೆಯಿತು. ಶಿಕ್ಷಕಿ ಭಾಗ್ಯಶ್ರೀ ಘಳಗಿಯವರು ರಚಿಸಿದ `ಹೆಳವನಕಟ್ಟೆಯ ಗಿರಿಯಮ್ಮ’ ಎಂಬ ಧಾರ್ಮಿಕ ನಾಟಕವು ಆಕರ್ಷಿಸಿತು.
ಭಕ್ತ ಮಂಡಳಿಯ ಆರ್.ಡಿ. ದೇಸಾಯಿ, ನಾಗರಾಜ ಜಿ.ಕುಲಕರ್ಣಿ, ದತ್ತಣ್ಣ ಜೋಶಿ, ಅಶೋಕ ಜೋಶಿ, ಆರ್.ಜಿ. ಕುಲಕರ್ಣಿ, ಆರ್.ವಿ. ಘಳಗಿ, ಜಿ.ಜಿ. ಕುಲಕರ್ಣಿ, ಶಂಕರ ಜೋಶಿ, ಶ್ರೀಕಾಂತ ದೇಸಾಯಿ, ಶ್ರೀರಂಗ ದೇಸಾಯಿ, ಎನ್.ಜಿ. ಕುಲಕರ್ಣಿ, ಗೋಪಾಲ ಜೋಶಿ ಇತರರು ಪಾಲ್ಗೊಂಡಿದ್ದರು.


