ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಣಜಿಗ ಸಮಾಜಕ್ಕೆ ಶಿಕ್ಷಣಕ್ಕಾಗಿ 2ಎ ಹಾಗೂ ಇತರೆ ಸೌಲಭ್ಯಕ್ಕಾಗಿ 3ಎ ಜಾತಿ ಪ್ರಮಾಣ ಪತ್ರವನ್ನು ನೀಡುವ ನಿಟ್ಟಿನಲ್ಲಿ ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ನೀಡುವಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅದನ್ನು ಕೂಡಲೇ ಸರಿಪಡಿಸಿ ವಿದ್ಯಾರ್ಥಿಗಳು ಮತ್ತು ಸಮಾಜದವರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ತಾಲೂಕಾ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಟ್ರಸ್ಟ್ನ ವತಿಯಿಂದ ಮಂಗಳವಾರ ತಹಸೀಲ್ದಾರ ಧನಂಜಯ ಎಂ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಲೋಹಿತ ನೆಲವಿಗಿ ಮತ್ತು ಕಾನೂನು ಸಲಹೆಗಾರ ಪ್ರಕಾಶ ವಾಲಿ ಮಾತನಾಡಿ, ಬಣಜಿಗ ಸಮಾಜದವರು ಜಾತಿ ಮತ್ತು ಆದಾಯ ಪ್ರಮಾಣಪತ್ರ/ಸಿಂಧುತ್ವ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದಾಗ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಪ್ರಮಾಣಪತ್ರವನ್ನು ನೀಡಬೇಕು. ಜಾತಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುವ ಅಥವಾ ಸಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ ಇಂತಹ ಪ್ರಕರಣಗಳನ್ನು ಸಮಾಜದವರು ಗಂಭೀರವಾಗಿ ಪರಿಗಣಿಸಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.
ಈಗಾಗಲೇ ತಹಸೀಲ್ದಾರ ಕಚೇರಿಯಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿದ್ದು, ತಹಸೀಲ್ದಾರರು ಕೂಡಲೇ ಇವುಗಳನ್ನು ಪರಿಶೀಲಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ, ಬಣಜಿಗ ಸಮಾಜ ಬಾಂಧವರಿಗೆ ನೋಂದಾಯಿತ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಬಣಜಿಗ ಜಾತಿಗೆ ಸೇರಿರುವ ಬಗ್ಗೆ ದೃಢೀಕರಣ ಪತ್ರವನ್ನು ನೀಡುವುದನ್ನು ಮಾನ್ಯ ಮಾಡಲು ಸರಕಾರದ ಸುತ್ತೋಲೆಯಿದ್ದು, ಇದನ್ನೂ ಪರಿಶೀಲಿಸಿ ಜಾತಿ ಪ್ರಮಾಣಪತ್ರವನ್ನು ನೀಡಲು ವಿನಂತಿಸುತ್ತೇವೆ ಎಂದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ ಎಂ, ಈ ಕುರಿತಂತೆ ಕಚೇರಿಯಲ್ಲಿ ಕನ್ಫ್ಯುಷನ್/ದೋಷಗಳು ಕಂಡುಬಂದಲ್ಲಿ ತಕ್ಷಣ ಸರಿಪಡಿಸುವುದಾಗಿ ಹೇಳಿದರು. ಈ ವೇಳೆ ಸಮಾಜದ ಮುಖಂಡರಾದ ಚಂದ್ರಣ್ಣ ಮಹಾಂತಶೆಟ್ಟರ, ಕೊಟ್ರೇಶ ಕತ್ತಿ, ವಿಜಯ ಬೂದಿಹಾಳ, ವಿಜಯ ಕೊಟಗಿ, ಚಂದ್ರಶೇಖರ ಹತ್ತಿಕಾಳ, ಶಿವಯೋಗಿ ಗಾಂಜಿ, ಆನಂದ ತಟ್ಟಿ, ಈರಣ್ಣ ಅಳಗುಂಡಗಿ, ವೀರಣ್ಣ ತೆಗ್ಗಳ್ಳಿ, ದುಂಡೇಶ ಕೊಟಗಿ, ಎಸ್.ವಿ. ಅಂಗಡಿ, ಶಾಮಣ್ಣ ಗಾಂಜಿ, ಶಿವು ನರ್ತಿ, ಶಂಕರ ಶಿಳ್ಳಿನ ಮುಂತಾದವರಿದ್ದರು.



