ವಿಜಯಸಾಕ್ಷಿ ಸುದ್ದಿ, ಗದಗ: ಹುಡ್ಕೋ ಕಾಲೋನಿ ನಿವಾಸಿ ಹಾಗೂ ವಿದ್ಯಾದಾನ ಸಮಿತಿ ಬಾಲಕರ ಪ.ಪೂ. ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರು, ವಿಶ್ವ ಹಿಂದೂ ಪರಿಷತ್ತಿನ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಪ್ರೊ. ಪಿ.ಆರ್. ಇನಾಮದಾರ ಅವರ ಪುತ್ರಿ ಸುಪ್ರಿಯಾ ಇನಾಮದಾರ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಡಾ. ಶೀನು ಅಭಿ ಅವರ ಮಾರ್ಗದರ್ಶನದಲ್ಲಿ ‘Talent Acquisition Matrix & Quality of Hire for Effective Hiring: A Data-Driven Approach’ ಎಂಬ ಮಹತ್ವದ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧವನ್ನು ಬೆಂಗಳೂರಿನ ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯ ಗೌರವಪೂರ್ವಕವಾಗಿ ಪಿಎಚ್.ಡಿ ಪದವಿಗೆ ಮಾನ್ಯತೆ ನೀಡಿದೆ.
ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಸುಪ್ರಿಯಾ, ಸಿ.ಡಿ.ಓ. ಜೈನ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಡಿ.ಎಸ್. ಕುರ್ತಕೋಟಿ ವಾಣಿಜ್ಯ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದಾರೆ. ಬಳಿಕ ಗದಗದ ಆದರ್ಶ ಶಿಕ್ಷಣ ಸಮಿತಿಯ ಎಲ್.ಎ. ಪೋತ್ನಿಸ್ ಮೆಮೋರಿಯಲ್ ಬಿ.ಬಿ.ಎ. ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿನಿಯಾಗಿ ಶ್ರೇಷ್ಠ ಸಾಧನೆ ತೋರಿದ ಅವರು, ನಂತರ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಪದವಿ ಗಳಿಸಿದ್ದಾರೆ.
ಸುಪ್ರಿಯಾ ಇನಾಮದಾರರ ಶೈಕ್ಷಣಿಕ ಸಾಧನೆಗೆ ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ ಬಿ. ಹುಯಿಲಗೋಳ, ಆದರ್ಶ ಶಿಕ್ಷಣ ಸಮಿತಿಯ ಚೇರ್ಮನ್ ಆನಂದ ಪೋತ್ನಿಸ್, ಉಪಾಧ್ಯಕ್ಷ ಪಿ.ಆರ್. ಅಡವಿ, ವಿರೂಪಾಕ್ಷ ಗವಾಯಿ ಸೇರಿದಂತೆ ಗದಗ ಜಿಲ್ಲಾ ಬ್ರಾಹ್ಮಣ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಅನೇಕ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.



