- ಹಾವೇರಿಯಲ್ಲಿ ಬೊಮ್ಮಾಯಿಯವರನ್ನು ಹಾಡಿಹೊಗಳಿದ ಪಶುಸಂಗೋಪನಾ ಸಚಿವ ಚವ್ಹಾಣ
ವಿಜಯಸಾಕ್ಷಿ ಸುದ್ದಿ, ಹಾವೇರಿ
ನಮ್ಮ ಸರಕಾರ ಬಂದಾಗಲೆಲ್ಲ ಪ್ರವಾಹ, ಕೋವಿಡ್ ಸಂಕಷ್ಟ ಎದುರಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕೋವಿಡ್ ಕಡಿಮೆ ಆಗುತ್ತಿದೆ. ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿದ್ದು, ರಾಜ್ಯ ಕೊರೊನಾ ಮುಕ್ತವಾಗಲಿದೆ
ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವಾಣ ಸಿಎಂ ರನ್ನು ಹಾಡಿಹೊಗಳಿದರು.
ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಾಯಿಗುಣ ಚೆನ್ನಾಗಿದೆ. ಅವರು ತುಂಬ ಜಾಣರಿದ್ದಾರೆ, ಪ್ರತಿಯೊಂದಿ ವಿಷಯದ ಬಗ್ಗೆ ಅಧ್ಯಯನ ಮಾಡುತ್ತಾರೆ ಎಂದು ಹೇಳಿದರು.
ಪ್ರತಿ ಜಿಲ್ಲೆಗೆ ಅಂಬುಲೆನ್ಸ್
ನಾನು ಪಶುಸಂಗೋಪನಾ ಸಚಿವನಾದ ಬಳಿಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ. ಪ್ರಾಣಿಗಳ ರಕ್ಷಣೆ ಬಗ್ಗೆ ಕಲ್ಯಾಣ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ.
ಪಶು ಸಂಜೀವಿನಿ ಅಂಬುಲೆನ್ಸ್ ವ್ಯವಸ್ಥೆ ಜಾರಿಯಾಗಿದ್ದು, ಜಾನುವಾರು ಖಾಯಿಲೆ ಬಂದರೆ
ರೈತರ ಮನೆ ಬಾಗಿಲಿಗೆ ಆಂಬುಲೆನ್ಸ್ ಬರಲಿದೆ. ಶೀಘ್ರದಲ್ಲಿ ಪ್ರತಿ ಜಿಲ್ಲೆಗೆ ಅಂಬುಲೆನ್ಸ್ ಕೊಡುತ್ತೇವೆ ಎಂದು ಹೇಳಿದರು.
ಪ್ರತಿ ಜಿಲ್ಲೆಗೊಂದು ಮಾದರಿ ಗೋಶಾಲೆ:
ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯುವ ಆಲೋಚನೆ ಇದೆ.
ಪ್ರತಿ ಜಿಲ್ಲೆಗೆ 50-100 ಎಕರೆ ಜಾಗದಲ್ಲಿ ಮಾದರಿ ಗೋಶಾಲೆಗಳ ನಿರ್ಮಾಣ ಮಾಡಲಾಗುವುದು. ಸಿಎಂ ಜಿಲ್ಲೆಯಲ್ಲಿ ಮೊದಲ ಗೋಶಾಲೆ ಆರಂಭವಾಗಲಿದೆ ಎಂದು ಸಚಿವ ಚವ್ಹಾಣ ತಿಳಿಸಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದಾಗಿನಿಂದ ಗೋಹತ್ಯೆ ನಿಷೇಧದ ಬಗ್ಗೆ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗಳನ್ನು ಮಾಡಲು ಸೂಚಿಸಿದ್ದೆನೆ.
ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆ. ಕಸಾಯಿ ಖಾನೆ ಬಂದ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಬಕ್ರೀದ್ ಸಮಯದಲ್ಲಿ ಎಲ್ಲ ಜಿಲ್ಲೆಗಳ ಎಸ್ಪಿಗಳ ಜೊತೆ ಚರ್ಚೆ ಮಾಡಿ 6-7 ಸಾವಿರ ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಪೊಲೀಸರ ಜೊತೆಗೆ ಗಡಿಗಳಲ್ಲಿ ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು ಎಂದು ಹೇಳಿದರು.
ಪ್ರಾಣಿ ಸಹಾಯವಾಣಿ ಕೇಂದ್ರ
ದೇಶದ ಇತಿಹಾಸದಲ್ಲಿಯೇ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ ಮಾಡಿದ್ದೇವೆ.
ಒಂದೇ ತಿಂಗಳಲ್ಲಿ ಹತ್ತು ಸಾವಿರ ಕರೆಗಳು ಬಂದಿವೆ ಎಂದು ಸಚಿವ ಚವ್ಹಾಣ ಮಾಹಿತಿ ನೀಡಿದರು.
ಬಳಿಕ ಬಂಕಾಪೂರ ಗೋ ಶಾಲೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.