ವಿಜಯಸಾಕ್ಷಿ ಸುದ್ದಿ, ಡಂಬಳ: ವರ್ಷಕ್ಕೊಂದು ಬಾರಿ ಜರುಗುವ ಜಾತ್ರೆ, ಉತ್ಸವ ಆಚರಣೆಗಳು ಭಕ್ತಿಯಿಂದ ಭಕ್ತರನ್ನು ಒಂದೆಡೆ ಸೇರಿಸಿ ಸಂತೋಷದ ಆಚರಿಸುವ ಉತ್ತಮ ವೇದಿಕೆಯಾಗಿದೆ. ಜಾತಿಯಲ್ಲಿ ಅರ್ಥವಿಲ್ಲ, ಮನುಷ್ಯತ್ವದಲ್ಲಿ ಅರ್ಥವಿದೆ. ಜಾತ್ರಾ ಮಹೋತ್ಸವಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿ ಹೇಳಿದರು.
ಡಂಬಳ ತೋಂಟದಾರ್ಯ ಕಲಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 286ನೇ ಜಗದ್ಗುರು ತೋಂಟದ ಮದರ್ಧನಾರೀಶ್ವರರ ಜಾತ್ರಾಮಹೋತ್ಸವ ಮತ್ತು ರೊಟ್ಟಿ ಜಾತ್ರೆಯ ಎಂದೇ ಪ್ರಸಿದ್ಧವಾಗಿರುವ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಜಾತ್ರೆ, ರಥೋತ್ಸವ, ಉತ್ಸವಗಳಲ್ಲಿ ಎಲ್ಲರೂ ಭಾಗವಹಿಸುವುದರಿಂದ ಅವುಗಳ ಆಚರಣೆಗೆ ಹೆಚ್ಚು ಅರ್ಥ ಮತ್ತು ಮೆರಗೂ ಬರುತ್ತದೆ. ರಥ ಎಳೆಯುವುದರ ಅರ್ಥ ಮನುಷ್ಯ ತಮ್ಮ ದೇಹ ಎಂಬ ರಥವನ್ನು ಶುದ್ಧವಾಗಿ ಇಟ್ಟುಕೊಳ್ಳುವುದಾಗಿದೆ. ಡಂಬಳ ರೊಟ್ಟಿ ಜಾತ್ರೆಯಲ್ಲಿ ಸರ್ವ ಜನಾಂಗದವರು ಒಟ್ಟಾಗಿ ಕುಳಿತುಕೊಂಡು ಊಟವನ್ನು ಮಾಡುವುದರಿಂದ ಭಾವೈಕ್ಯತೆ ಹೆಚ್ಚುತ್ತದೆ. ಇದು ಜನ ಸಾಮಾನ್ಯರ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಇದಕ್ಕೆ ಭಕ್ತರೇ ಕಾರಣ. ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಜನರಲ್ಲಿ ಪರಸ್ಪರ ಭಾವೈಕ್ಯತೆ ಮೂಡುತ್ತದೆ ಎಂದು ಹೇಳಿದರು.
ವೇದಮೂರ್ತಿ ರಾಜಶೇಖರಯ್ಯ ಹಿರೇಮಠ ಜಾತ್ರಾಮಹೋತ್ಸವ ಜರುಗುವ ಕುರಿತು ಮಾಹಿತಿ ನೀಡಿ, ಡಂಬಳ ತೋಂಟದಾರ್ಯ ಮಠದ 286ನೇ ಜಾತ್ರಾ ಮಹೋತ್ಸವವು ಮಘಾ ನಕ್ಷತ್ರದ ಫೆ. 3ರಂದು ರಥೋತ್ಸವ, ಫೆ. 4ರಂದು ಲಘು ರಥೋತ್ಸವ ಜರುಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವ್ಹಿ. ಹಿರೇಮಠ, ಹಿರಿಯರಾದ ಮರಿತಿಮ್ಮಪ್ಪ ಆದಮ್ಮನವರ, ಫಕ್ಕನಗೌಡ ರಡ್ಡೇರ, ಮುತ್ತಣ್ಣ ಹಿರೇಮಠ, ಮಲ್ಲಣ್ಣ ಯರಾಶಿ, ಗವಿಸಿದ್ದಪ್ಪ ಬಿಸನಳ್ಳಿ, ಶಂಭಣ್ಣ ಪಟ್ಟಣಶೆಟ್ಟಿ, ವಿರೂಪಾಕ್ಷ ಲಕ್ಕುಂಡಿ, ಸಿದ್ದಣ್ಣ ನಂಜಪ್ಪನವರ, ಮುದಿಯಪ್ಪ ಗದಗಿನ, ಗವಿಸಿದ್ದಪ್ಪ ಹಳ್ಳಾಕಾರ, ಶರಣಪ್ಪ ಬಂಡಿ, ದುರಗಪ್ಪ ಹರಿಜನ, ಬಸವರಾಜ ಹಮ್ಮಿಗಿ, ಮುತ್ತಣ್ಣ ಕೊಂತಿಕಲ್ಲ, ಚಂದ್ರು ಯಳಮಲಿ, ಮರಿಯಪ್ಪ ಸಿದ್ದಣ್ಣನವರ, ಬಸಪ್ಪ ಕೊತಂಬರಿ, ಚೆನ್ನಪ್ಪ ಕರಡ್ಡಿ, ಬಸೀರ್ ಅಹ್ಮದ ತಾಂಬೋಟಿ, ಈರಣ್ಣ ಪಟ್ಟಣಶೆಟ್ಟಿ, ಪರುಶರಾಮ ವಡ್ಡರ, ಅಶೋಕ ಮಾನೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿದರು.
ಬಾಕ್ಸ್
ಜಾತ್ರಾ ಸಮಿತಿ ರಚನೆ
ಫೆಬ್ರುವರಿಯಲ್ಲಿ ಜರುಗುವ ರೊಟ್ಟಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಯಲ್ಲಪ್ಪ ದಂಡಿನ, ಉಪಾಧ್ಯಕ್ಷರಾಗಿ ಯಂಕಣ್ಣ ಗಡಗಿ, ಕಾರ್ಯದರ್ಶಿಯಾಗಿ ಬಡ್ನೇಸಾಬ ಅತ್ತಾರ ಹಾಗೂ ಖಜಾಂಚಿಯಾಗಿ ತಿಮ್ಮಣ್ಣ ವಡ್ಡರ ನೇಮಕಗೊಂಡಿದ್ದಾರೆ.



