ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ, ಬೈಕ್ ಕಳ್ಳತನ, ಸೈಬರ್ ಅಪರಾಧಗಳು ಹೆಚ್ಚುತ್ತಿರುವುದನ್ನು ಗಮನಿಸಿ ಗದಗ ಜಿಲ್ಲಾ ಪೊಲೀಸ್ ಇಲಾಖೆಯು ಲಕ್ಕುಂಡಿ ಗ್ರಾಮದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಗದಗ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಕಳ್ಳತನ ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮವಾಗಿ ವಹಿಸಬೇಕಾದ ಕ್ರಮಗಳ ಬಗ್ಗೆ ಭಿತ್ತಿಪತ್ರಗಳನ್ನು ಹಂಚುತ್ತಿದ್ದಾರೆ.
ನಗದು ಹಣ ಮತ್ತು ಆಭರಣಗಳನ್ನು ಬ್ಯಾಂಕ್ ಲಾಕರ್ನಲ್ಲಿಡಬೇಕು. ಇತ್ತೀಚೆಗೆ ಹೊರಗಡೆ ನಿಲ್ಲಿಸಿರುವ ಬೈಕ್ಗಳ ಕಳ್ಳತನ ಹೆಚ್ಚುತ್ತಿದ್ದು, ವಾಹನಗಳಿಗೆ ಗುಣಮಟ್ಟದ ಹ್ಯಾಂಡ್ಲಾಕ್ ಮತ್ತು ಎಚ್ಚರಿಕೆಯ ಗಂಟೆ ಅಳವಡಿಸಬೇಕು. ಮನೆಯ ಹೊರಗಡೆ ಸಿ.ಸಿ. ಕ್ಯಾಮರಾ ಅಳವಡಿಸಬೇಕು. ವಾಹನ ಖರೀದಿ ಅಥವಾ ಮಾರಿದ ನಂತರ ನಿಗದಿತ ಅವಧಿಯಲ್ಲಿ ಎಲ್ಲ ದಾಖಲೆಗಳ ವರ್ಗಾವಣೆ ಮಾಡಿಸಿಕೊಳ್ಳಬೇಕು. ನಿರ್ಜನ ಪ್ರದೇಶದಲ್ಲಿ ವಾಕಿಂಗ್ ಹೋಗುವುದನ್ನು ನಿಲ್ಲಿಸಬೇಕು. ಚಿನ್ನದ ಆಭರಣಗಳನ್ನು ಧರಿಸಿದಾಗ ಜಾಗೃತರಾಗಿರಬೇಕು ಮತ್ತು ಸೈಬರ್ ಕ್ರೈಂ ಕುರಿತು ಎಚ್ಚರವಾಗಿರುವಂತೆ ಜಾಗೃತಿ ಮೂಡಿಸಲಾಯಿತು.
ಗದಗ ಗ್ರಾಮೀಣ ಸಿ.ಪಿ.ಐ ಸಿದ್ದರಾಮೇಶ ಗಡೇದ, ಸಿ.ಎಸ್.ಐ ವಿ.ಜಿ. ಪವಾರ, ಪಿ.ಎಸ್.ಐ ಶರಣಮ್ಮ ಕವಲೂರು, ಬೀಟ್ ಪೊಲೀಸ್ ಆರ್.ಎಂ. ಉಪ್ಪಾರ ಸೇರಿದಂತೆ ಗ್ರಾಮೀಣ ಮತ್ತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇತ್ತೀಚೆಗೆ ಲಕ್ಕುಂಡಿ ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊರಗಡೆ ಇಟ್ಟಿರುವ ಬೈಕ್, ಕೃಷಿ ಪರಿಕರಗಳು, ಜಾನುವಾರುಗಳು, ಅಂಗಡಿಗಳು, ತೋಟದಲ್ಲಿಯ ಪಂಪ್ಸೆಟ್ಗಳು ಕಳ್ಳತನವಾಗುತ್ತಿವೆ. ಆದ್ದರಿಂದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಸಿ.ಸಿ. ಕ್ಯಾಮರಾಗಳು ಹೆಚ್ಚು ಉಪಯೋಗವಾಗುತ್ತವೆ. ಆದ್ದರಿಂದ, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕೆಂದು ಗ್ರಾಮದ ಗಣ್ಯರಾದ ಅಶೋಕ ಬೂದಿಹಾಳ, ಯುವ ಮುಖಂಡ ಪ್ರಕಾಶ ಅರಹುಣಸಿ, ರಾಜು ಪಾಟೀಲ, ಬಸವರಾಜ ಮುಳ್ಳಾಳ, ಗವಿಶಿದ್ದಪ್ಪ ಯಲಿಶಿರುಂದ, ಶರಣಪ್ಪ ಮೆಣಸಿನಕಾಯಿ, ತಿಪ್ಪಣ್ಣ ಅಂಬಕ್ಕಿ, ಚಂದ್ರು ಬಣವಿ ಮುಂತಾದವರು ಒತ್ತಾಯಿಸಿದ್ದಾರೆ.



