ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಹನುಮಾನ ಭಕ್ತ ಮಾಲಾಧಾರಿಗಳಿಂದ ಗಜೇಂದ್ರಗಡ ಪಟ್ಟಣದಲ್ಲಿ ಭವ್ಯ ನಗರ ಸಂಕೀರ್ತನಾ ಕಾರ್ಯಕ್ರಮವು ಶ್ರದ್ಧಾ–ಭಕ್ತಿಯಿಂದ ನೆರವೇರಿತು. ಹಿರೇಬಜಾರದಲ್ಲಿನ ರುಕ್ಮಿಣಿ ಪಾಡುರಂಗ ದೇವಾಲಯದಿಂದ ಆರಂಭವಾದ ಸಂಕೀರ್ತನಾ ಮೇಳವು ನಗರ ಪ್ರಮುಖ ಬೀದಿಗಳಾದ ಹಿರೇ ಬಜಾರ, ಕೊಳ್ಳಿಯವರ ವೃತ್ತ, ಹುಡೇದ ಮಹಾಲಕ್ಷಿಶ್ವರ ವೃತ್ತ, ಭಜರಂಗದಳ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತಗಳ ಮೂಲಕ ಸಂಚರಿಸಿತು.
ಸಾಂಪ್ರದಾಯಿಕ ಚಂಡೆ ಮೇಳ, ತಾಳ–ಮದ್ದಲೆ ನಾದ, ಹನುಮಾನ್ ಚಾಲಿಸಾ, ನಾಮಸಂಕೀರ್ತನೆ ಹಾಗೂ ಭಜನೆಗಳು ಭಕ್ತಿ ಸ್ಫುರಿಸಿದವು. ಮಾರ್ಗಮಧ್ಯೆ ಹಲವೆಡೆ ಭಕ್ತರು ಮಂಗಳಾರತಿ ಸಲ್ಲಿಸಿ ನೀರು ನೀಡುವ ಮೂಲಕ ಮಾಲಾಧಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಹನುಮಾನ ಮಾಲಾಧಾರಿಗಳ ಸಂಘಟಕ ಸಂಜೀವ ಜೋಷಿ ಮಾತನಾಡಿ, ಹನುಮಾನ್ ಮಾಲಾಧಾರಿಗಳ ನಾಮಸಂಕೀರ್ತನೆ ಮನಸ್ಸಿಗೆ ಶಾಂತಿ, ಸಮಾಜಕ್ಕೆ ಏಕತೆ ಮತ್ತು ಯುವಜನತೆಗೆ ಸಕಾರಾತ್ಮಕ ದಿಕ್ಕು ನೀಡುವ ಶಕ್ತಿ ಹೊಂದಿದೆ. ಈ ವರ್ಷವೂ ನಗರ ಸಂಕೀರ್ತನೆಯನ್ನು ಭಕ್ತಭಾವದಿಂದ ಯಶಸ್ವಿಯಾಗಿ ನಡೆಸಿರುವುದು ಎಲ್ಲರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಜುನಾಥ ಅಜಮೀರ, ಪ್ರಕಾಶ ಅಯ್ಯನಗೌಡರ, ರವಿ ಕಲಾಲ, ಪ್ರಸಾದ ಬಡಿಗೇರ, ಗಣೇಶ ದಿವಾಣದ, ಮಂಜು ಹೂಗಾರ, ಅಶೋಕ ಜಕ್ಕಲಿ, ಕುಮಾರ ರಾಠೋಡ ಮುಂತಾದವರಿದ್ದರು.


