ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ಪಾದಗಟ್ಟಿಯಿಂದ ಹಳೆಯ ಬಸ್ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಶ ಶೆಟ್ಟಿ) ಬಣದ ಕಾರ್ಯಕರ್ತರು ಮಂಗಳವಾರ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ರಸ್ತೆಯನ್ನು ಕಳೆದ 8/10 ವರ್ಷಗಳ ಹಿಂದೆ ಪುರಸಭೆ ಅಭಿವೃದ್ಧಿ ಮಾಡುವ ಕಾರಣದಿಂದ ಒತ್ತುವರಿ ತೆರವುಗೊಳಿಸಿತ್ತು. ಆದರೆ ಇದುವರೆಗೂ ರಸ್ತೆ ಅಭಿವೃದ್ಧಿಯ ಬಗ್ಗೆ ಪುರಸಭೆ ಸೇರಿ ಯಾರೊಬ್ಬ ಜನಪ್ರತಿನಿಧಿಯೂ ಕಿಂಚಿತ್ತೂ ಚಿಂತನೆ ಮಾಡಿಲ್ಲ. ಈ ಭಾಗದ ಜನರು ಪ್ರತಿದಿನ ಧೂಳಿನ ಸಮಸ್ಯೆಯಿಂದಾಗಿ ರೋಗ-ರುಜಿನಗಳಿಗೆ ತುತ್ತಾಗಿ ರೋಸಿಹೋಗಿದ್ದಾರೆ. ರಸ್ತೆ ನಿರ್ಮಿಸಬೇಕು ಎಂದು ಅನೇಕ ಬಾರಿ ನಿವಾಸಿಗಳು ಪುರಸಭೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡ ನಿವಾಸಿಗಳು ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದರು.
ಪ್ರತಿಭಟನಾಕಾರರು ಹಳೆಯ ಬಸ್ ನಿಲ್ದಾಣ, ಬಸ್ತಿಬಣ, ಚನ್ನಮ್ಮನ ವನ, ಪರ್ವತ ಮಲ್ಲಯ್ಯನ ದೇವಸ್ಥಾನ, ವಿದ್ಯಾರಣ್ಯ ವರ್ತುಲಕ್ಕೆ ತೆರಳುವ ಮಾರ್ಗ ಹಾಗೂ ಪುರಸಭೆಯಿಂದ ಬಜಾರಕ್ಕೆ ಬರುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದ್ದರು. ಎಲ್ಲ ಕಡೆ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು.
ಪುರಸಭೆ ಸಾಮಾನ್ಯ ನಿಧಿಯಡಿ ರಸ್ತೆ ನಿರ್ಮಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಸಧ್ಯ ಲಭ್ಯ ಇರುವ ಅನುದಾನದಲ್ಲಿ ಪಾದಗಟ್ಟಿಯಿಂದ ಪರ್ವತಮಲ್ಲಯ್ಯನ ದೇವಸ್ಥಾನದವರೆಗೆ ಸಿಸಿ ರಸ್ತೆ ನಿರ್ಮಿಸಿ ನಂತರ ಮುಂದಿನ ದಿನಗಳಲ್ಲಿ ಉಳಿದ ರಸ್ತೆ ನಿರ್ಮಿಸಲಾಗುವುದು ಎಂದು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಇದಕ್ಕೆ ಪ್ರತಿಭಟನಾಕಾರರು ಒಪ್ಪದೇ ಪೂರ್ಣ ರಸ್ತೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದರು. ಆಗ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಸಮಾಧಾನಪಡಿಸಿ, ಈಗ ಇರುವ ಅನುದಾನದಲ್ಲಿ ರಸ್ತೆ ನಿರ್ಮಿಸಲಿ. ಈ ಕಾಮಗಾರಿ ಮುಗಿಯುವುದರೊಳಗಾಗಿ ಉಳಿದ ರಸ್ತೆಯನ್ನೂ ನಿರ್ಮಿಸಲು ಅನುದಾನ ಹೊಂದಿಸೋಣ ಎಂದು ತಿಳಿಸಿದರು. ಶಾಸಕರ ಭರವಸೆಯಿಂದ ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿದರು.
ಈ ವೇಳೆ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ, ಶಕ್ತಿ ಕತ್ತಿ, ಮಂಜಣ್ಣ ಗಾಂಜಿ, ಅಂಬರೀಶ್ ಗಾಂಜಿ, ಶಿವಾನಂದ ಮೆಕ್ಕಿ, ನಾಗರಾಜ ಬಟಗುರ್ಕಿ, ಬಸವರಾಜ ಕುಂಬಿ, ಆನಂದ ತಟ್ಟಿ, ಆಕಾಶ ಸೌದತ್ತಿ, ಮಲ್ಲನಗೌಡ ಪಾಟೀಲ, ಹಡಗಲಿಮಠ, ಮಂಜುನಾಥ ಗಾಂಜಿ, ಕೊಟ್ರೇಶ ಕತ್ತಿ, ಈಶ್ವರಗೌಡ ಪಾಣಿಗಟ್ಟಿ, ಪ್ರವೀಣ್ ದಶಮನಿ, ಶ್ರೇಯಾಂಕ ಹಿರೇಮಠ, ಭರಮಣ್ಣ ಗೌಳಿ, ಪವನ್ ಹಗರದ, ಹನುಮಂತ ಕುಂಬಾರ, ಅಭಿಷೇಕ್ ಗೋಂಗಡಿ ಇದ್ದರು.
ವಿಷಯ ತಿಳಿದು ಶಾಸಕ ಡಾ. ಚಂದ್ರು ಲಮಾಣಿ ಸ್ಥಳಕ್ಕೆ ಆಗಮಿಸಿ, ಕರವೇ ಕಾರ್ಯಕರ್ತರು ಮತ್ತು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಇಂಜಿನಿಯರ್ ವೀರೇಂದ್ರಸಿಂಗ್ ಕಾಟೆವಾಲೆ ಅವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದರು.


