ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ ಜಿಲ್ಲೆ ಸ್ಕೂಲ್ ಚಂದನದಲ್ಲಿ ಡಿ.13ರಂದು ನಡೆಯುವ ಭಾರತರತ್ನ ಪ್ರೊ. ಸಿಎನ್ಆರ್ ರಾವ್ ಅವರ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ, 2025ನೇ ಸಾಲಿನ `ಚಂದನಶ್ರೀ’ ಪ್ರದಾನ ಮತ್ತು ದಿ. ಹೆಚ್.ಸಿ. ರಟಗೇರಿಯವರ ಕಂಚಿನ ಮೂರ್ತಿ ಅನಾವರಣ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಅವರು ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಇದೊಂದು ವಿಜ್ಞಾನಲೋಕದ ಅನಾವರಣದ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮವಾಗಿದೆ. ಜಗತ್ತಿನ ಅನೇಕ ಶ್ರೇಷ್ಠ ವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡು 3 ದಿನಗಳ ಕಾಲ ಮಾರ್ಗದರ್ಶನ ಮಾಡುತ್ತಾರೆ. 10 ವರ್ಷಗಳ ಹಿಂದೆ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರು ಚಂದನ ಶಾಲೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ವಿಜ್ಞಾನ ವಿಸ್ತೃತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಈ ಭಾಗದಲ್ಲಿ ವಿಜ್ಞಾನ ವಿಷಯದ ವಾತಾವರಣ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಕುತೂಹಲ ಮೂಡಿಸಲಾಗುತ್ತದೆ. ಅದಕ್ಕಾಗಿ ಚಂದನ ಶಾಲೆಯಲ್ಲಿಯೇ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದು ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದಾರೆ. ನಂತರ ಚಂದನ ಸಂಸ್ಥೆಯ 2025ನೇ ಸಾಲಿನ ಚಂದನಶ್ರೀ ಪ್ರಶಸ್ತಿಯನ್ನು ನಿವೃತ್ತ ಐಎಎಸ್ ಅಧಿಕಾರಿ, ಗ್ರೇಟರ್ ಬೆಂಗಳೂರು ರೂವಾರಿ ಬಿ.ಎಸ್. ಪಾಟೀಲ ಇವರಿಗೆ ಪ್ರದಾನ ಮಾಡುವರು. ಸ್ಕೂಲ್ ಚಂದನ ಗೌರವ ನಿರ್ದೇಶಕರಾಗಿದ್ದ ನಿ.ಶಿಕ್ಷಕ ದಿ. ಎಚ್.ಸಿ. ರಟಗೇರಿ ಅವರ ಕಂಚಿನ ಮೂರ್ತಿ ಅನಾವರಣಗೊಳಿಸುವರು ಎಂದು ಹೇಳಿದರು.
ಸ್ಕೂಲ್ ಚಂದನದ ಸಂಸ್ಥಾಪಕ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಟಿ. ಈಶ್ವರ ಮಾತನಾಡಿ, ಪ್ರೊ. ಸಿ.ಎನ್.ಆರ್. ರಾವ್ ಅವರು ಭಾರತದ ಎರಡು ಕಡೆಗಳಲ್ಲಿ ಮಾತ್ರ ಈ ವಿಜ್ಞಾನ ವಿಸ್ತೃತ ಎನ್ನುವ ಕಾರ್ಯಕ್ರಮ ಮಾಡುತ್ತಾರೆ. ಉತ್ತರಾಖಂಡದಲ್ಲಿ ಒಂದು ಹಾಗೂ ಕರ್ನಾಟಕದ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಚಂದನ ಶಾಲೆಯ ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಭಾರತರತ್ನ ಸಿ.ಎನ್.ಆರ್. ರಾವ್ ಅವರು ಲಕ್ಷ್ಮೇಶ್ವರದ ಸ್ಕೂಲ್ ಚಂದನದಲ್ಲಿ ಪ್ರಾರಂಭಿಸಿರುವ ವಿಜ್ಞಾನ ಕೇಂದ್ರದ ಬಗ್ಗೆ ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ಹೊಂದಿದ್ದಾರೆ. ಶಾಲೆಯ ಬಗ್ಗೆ ಅಪಾರ ಗೌರವ ಹೊಂದಿರುವ ಅವರು 2017ರಲ್ಲಿ ಶಾಲೆಗೆ ಬಂದು ಪಾಠ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸಿ.ಎಂ ಸಿದ್ದರಾಮಯ್ಯನವರು, ಕಾನೂನು-ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ, ಕೇಂದ್ರ ಮಾಜಿ ಸಚಿವ ಜೈರಾಮ ರಮೇಶ್, ಜಿ.ಎಸ್. ಪಾಟೀಲ ಹಾಗೂ ಶಾಸಕರು, ಮಾಜಿ ಶಾಸಕರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್ಲ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಐ.ಎಸ್. ಪಾಟೀಲ, ಹುಮಾಯೂನ್ ಮಾಗಡಿ, ಆನಂದಸ್ವಾಮಿ ಗಡ್ಡದೇವರಮಠ, ಜಿ.ಆರ್. ಕೊಪ್ಪದ, ಜಿ.ವಿ. ಪಾಟೀಲ, ನಾಗರಾಜ ಮಡಿವಾಳರ, ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ವೀರೇಂದ್ರಗೌಡ ಪಾಟೀಲ್, ವಿ.ಜಿ. ಪಡಗೇರಿ, ದಾದಾಪೀರ ಮುಚ್ಚಾಲೆ, ಐ.ಎಸ್. ಪಾಟೀಲ್, ವೀರಯ್ಯ ಮಠಪತಿ, ವೀರಣ್ಣ ಅಂಗಡಿ, ಮಕಂದಾರ, ಭಾಗ್ಯಶ್ರೀ ಬಾಬಣ್ಣ, ಜಿ.ಆರ್. ಕೊಪ್ಪದ, ಅಂಬರೀಶ ತೆಂಬಂದಮನಿ ಮುಂತಾದವರಿದ್ದರು.



