ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಮತ್ತು ಡಂಬಳ ಹೋಬಳಿಯ ಗ್ರಾಮಗಳಲ್ಲಿ ಕೆರೆಗಳು ತುಂಬಿರುವ ಕಾರಣ, ಚಳಿಗಾಲದ ಸಮಯವಷ್ಟೇ ಅಲ್ಲದೆ, ಇನ್ನೊಂದು ಕಡೆ ದಿತ್ವಾ ಚಂಡಮಾರುತದ ಅಬ್ಬರದಿಂದಾಗಿ ಶೀತ ವಾತಾವರಣದಿಂದಾಗಿ ಚಳಿಯ ತೀವ್ರತೆ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ.
ತಾಪಮಾನದಲ್ಲಿ ಏರಿಕೆ-ಇಳಿಕೆಗಳಿಂದ ಮಕ್ಕಳು ಹೆಚ್ಚು ರೋಗ ಬಾಧಿತರಾಗಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ವೃದ್ಧರಲ್ಲಿ ಅಸ್ತಮಾ ತೊಂದರೆಗಳು ಹೆಚ್ಚಾಗಿವೆ. ತಂಪಾದ ಗಾಳಿ ಮತ್ತು ಹೆಚ್ಚು ತೇವಾಂಶವು ಸೋಂಕಿಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರು ಮುಂಜಾನೆ ಸಂಜೆ ವೇಳೆ ಮಕ್ಕಳಿಗೆ ಬೆಚ್ಚಗಿನ ಬಟ್ಟೆ ಮತ್ತು ಬಿಸಿ ನೀರು ನೀಡುವಂತೆ ಸಲಹೆ ಕೂಡಾ ನೀಡಲಾಗಿದೆ.
ಹಿರಿಯರಲ್ಲಿ ಆರೋಗ್ಯ ಸಂಕಷ್ಟ: ವಯಸ್ಕರಲ್ಲಿ ಕಫದ ಸಮಸ್ಯೆ, ಸೈನಸ್, ರಕ್ತದ ಒತ್ತಡದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತಿದೆ. ಮಧುಮೇಹ, ಹೃದಯರೋಗಿಗಳು ಹೆಚ್ಚಾಗಿ ಎಚ್ಚರಿಕೆ ವಹಿಸುವುದು ಅಗತ್ಯ. ಹಿರಿಯರಿಗೆ ಚಳಿಯ ಸಮಯದಲ್ಲಿ ಹೆಚ್ಚು ಅಪಾಯಕಾರಿಯಾಗಿದೆ. ಕೈಕಾಲು ಜೋಮು ಹಿಡಿಯುವುದು, ಮೂಳೆ ನೋವು, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮುಂಜಾನೆ 3.30ರಿಂದ 6 ಗಂಟೆ ಸಮಯ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ. ತಾಪಮಾನ ತೀವ್ರವಾಗಿ ಕುಸಿಯುವುದರಿಂದ ಹೃದಯಾಘಾತದ ಪ್ರಕರಣಗಳ ಸಾಧ್ಯತೆಯೂ ಹೆಚ್ಚು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಚಳಿಯಿಂದ ಮನೆ ಇಲ್ಲದೆ ಜೋಪಡಿಗಳಲ್ಲಿ ವಾಸವಿರುವವರು ಶೀತ ಗಾಳಿಯ ನೇರ ಪರಿಣಾಮಕ್ಕೆ ತುತ್ತಾಗುತ್ತಿದ್ದಾರೆ. ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಇಳಿಯುವ ಹೈಪೋಥರ್ಮಿಯಾ ಪ್ರಕರಣಗಳು ಹೆಚ್ಚಾಗುವ ಭೀತಿ ಇದೆ. ಹಳೆಯ ಕಾಯಿಲೆಗಳ ತೀವ್ರಗತಿ, ಉಸಿರಾಟದ ತೊಂದರೆ ಹೆಚ್ಚುತ್ತಿದೆ ಮತ್ತು ರಾತ್ರಿ ತಂಗಲು ಸ್ಥಳದ ಕೊರತೆ, ಮನೆ ರಹಿತರಿಗೆ ದೊಡ್ಡ ಸಂಕಷ್ಟವಾಗಿದೆ. ಇವರಿಗೆ ಜಿಲ್ಲಾಡಳಿತ ಬ್ಲ್ಯಾಂಕೆಟ್ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ವಸತಿ ಕಲ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಬೆಳೆಗಳಿಗೆ ರೋಗಬಾಧೆ: ತಾಪಮಾನ ಕುಸಿತ ಮತ್ತು ಹೆಚ್ಚಿದ ತೇವಾಂಶದಿಂದ ಧಾನ್ಯ, ಬೀಜ, ತರಕಾರಿ ಬೆಳೆಗಳಲ್ಲಿ ಬೆಳವಣಿಗೆ ನಿಧಾನವಾಗಿದೆ. ಟೊಮೆಟೋ, ಬೀನ್ಸ್, ಬದನೆಕಾಯಿ ಬೆಳೆಗಳಲ್ಲಿ ಪದೇ ಪದೇ ಕೀಟ, ರೋಗಗಳು ಕಾಣಿಸಿಕೊಳ್ಳುತ್ತಿವೆ. ಬ್ಲೈಟ್, ಮಿಲ್ಡ್ಯೂ, ವಿಲ್ಟ್, ಎಲೆಕಲೆ ರೋಗಗಳು ತರಕಾರಿ ಬೆಳೆಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿವೆ. ಬೆಳೆಗಳ ಬೆಳವಣಿಗೆ ನಿಧಾನಗೊಳ್ಳುವುದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಕುಗ್ಗಿ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಗಳಿವೆ.
ಸಾಕು ಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆ: ಚಳಿಯಿಂದ ದನ, ಮೇಕೆ-ಕುರಿಗಳಲ್ಲಿ ಹಾಲು ಉತ್ಪಾದನೆ, ಮಾಂಸ ಶೇಖರಣೆ ಕುಂದಿದ್ದು, ಹೊಸದಾಗಿ ಜನಿಸಿದ ಕರು, ಮೇಕೆ, ಕುರಿಗಳಿಗೆ ತೀವ್ರ ಚಳಿಯ ಅಪಾಯ ಹೆಚ್ಚಾಗಿದೆ. ಕೋಳಿ ಸಾಕಾಣಿಕೆಯಲ್ಲೂ ರೋಗಗಳ ಭೀತಿ ಹೆಚ್ಚಾಗಿದೆ. ರೇಷ್ಮೆ ಉತ್ಪಾದನೆಯಲ್ಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಳೆ ರಕ್ಷಣೆಗಾಗಿ ರೈತರು ಹೆಚ್ಚಿನ ನಿಗಾ ವಹಿಸಿ ಕೃಷಿ ಮತ್ತು ತೋಟಗಾರಿಕಾಾಧಿಕಾರಿಗಳ ಸಲಹೆ ಪಡೆಯಲು ಮುಂದಾಗಬೇಕಾಗಿದೆ.
ಹೀಗಾಗಿ, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮನೆಯಿಂದ ಹೊರ ಬರುವವರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್, ಟೋಪಿ, ಜರ್ಕಿನ್ ಸೇರಿದಂತೆ ಬೆಚ್ಚಗಿಡುವ ಬಟ್ಟೆಗಳಿಗೆ ಮೊರೆ ಹೋಗಿದ್ದಾರೆ. ಚಳಿ ಹೆಚ್ಚಾಗಿರುವ ಕಾರಣ, ಕಾಫಿ, ಚಹಾ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಸಿಗರೇಟ್ ಬಳಕೆ, ಮದ್ಯದಂಗಡಿಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಚಳಿ ವಾತಾವರಣದಿಂದ ಬೆಳಗ್ಗೆ ಜನತೆ ವಾಕಿಂಗ್ ಬರಲು ಹಿಂದೇಟು ಹಾಕುತ್ತಿದ್ದರೆ.
ಚಳಿ ಮುಂದುವರಿಕೆ ಸಾಧ್ಯತೆ: ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ರಾತ್ರಿ, ಮುಂಜಾನೆ ಚಳಿ ಮುಂದುವರಿಯಲಿದ್ದು, ಮಾರ್ಚ್ ವೇಳೆಗೆ ಸಾಮಾನ್ಯ ಬೇಸಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಚಳಿಯ ಈ ಅವಧಿಯಲ್ಲಿ ಆರೋಗ್ಯ ಜಾಗೃತಿ, ಮನೆ ರಹಿತರಿಗೆ ಆಶ್ರಯ ಮನೆಗಳ ವ್ಯವಸ್ಥೆ ಮತ್ತು ರೈತರಿಗೆ ತಾಂತ್ರಿಕ, ಆರ್ಥಿಕ ಬೆಂಬಲ ಅಗತ್ಯವಿದ್ದು, ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಆರೋಗ್ಯ ಮತ್ತು ಕೃಷಿ ಎರಡೂ ಕ್ಷೇತ್ರಗಳಲ್ಲಿ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
ಕೆ.ಆರ್. ದೊಡ್ಡಮನಿ, ಡಂಬಳ.



