ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ಮಧ್ಯವರ್ತಿಗಳು, ಏಜೆಂಟ್ ರನ್ನು ದೂರ ಇಟ್ಟಾಗ, ಆರೋಪ ಮಾಡುವುದು ಸಹಜ. ಯಾವ ತನಿಖೆ ನಡೆಸಿದರೂ ಉತ್ತರ ನೀಡಲು ಸಿದ್ಧ ಎಂದು ಕಿಕ್ ಬ್ಯಾಕ್ ಆರೋಪಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಹಿರಿಯೂರು ನಗರಕ್ಕೆ ತೆರಳುವ ಮಾರ್ಗ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದವೂ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು. ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ 500 ಕೋಟಿ ರೂ. ಕಿಕ್ ಬ್ಯಾಕ್ ಆರೋಪ ಬಂದಿತ್ತು ಎಂದು ತಿರುಗೇಟು ನೀಡಿದರು.
ಕೃಷಿ ಇಲಾಖೆಯ ಟೆಂಡರ್ ಆನ್ ಲೈನ್ ಮೂಲಕ ನಡೆಯುತ್ತದೆ. ಒಂದು ಪೈಸೆ ಕೂಡ ಅವ್ಯವಹಾರ ಸಾಧ್ಯವಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಇಲಾಖೆಗಳಿಗಿಂತ ಪಾರದರ್ಶಕವಾಗಿರುವುದು ಕೃಷಿ ಇಲಾಖೆ ಒಂದೇ.
ಪ್ರತಿಯೊಬ್ಬ ರೈತ ಆನ್ ಲೈನ್ ನಲ್ಲಿ ಹಣ ಕಟ್ಟುತ್ತಾನೆ. ದುರುದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆರೋಪ ಪ್ರೂ ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಜನ ವಿರೋಧಿ ಸರ್ಕಾರ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪಾಟೀಲ್, ಜನಪರವಾಗಿ ಅವರು ಇದ್ದದ್ದರೆ ಜನ ಯಾಕೆ ತಿರಸ್ಕಾರ ಮಾಡುತ್ತಿದ್ದರು. ಅದಕ್ಕಾಗೆ ಅವರು ವಿರೋಧ ಪಕ್ಷದಲ್ಲಿ ಇರುತ್ತಾರೆ.
2023 ರಲ್ಲಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ ಭರವಸೆ ವ್ಯಕ್ತಪಡಿಸಿದರು.
ನಿಫಾ ವೈರಸ್ ಆತಂಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ರಾಜ್ಯದಲ್ಲಿ ಗಡಿ ಭಾಗದಲ್ಲಿ ಚೆಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೆಗಟಿವ್ ವರದಿ ಬಂದ ಬಳಿಕವಷ್ಟೇ ರಾಜ್ಯಕ್ಕೆ ಬರಲು ನಿಯಮ ಜಾರಿ ಇದೆ. ಉಳಿದ ರಾಜ್ಯಗಳಿಗಿಂತ ನಮ್ಮ ರಾಜ್ಯದವರು ಸೇಫ್ ಇದ್ದೇವೆ ಎಂದು ಹೇಳಿದರು.
ರೈತ ವಿರೋಧಿ ಕಾಯ್ದೆ ಖಂಡಿಸಿ ಭಾರತ್ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ, ಯಾವುದೂ ರೈತ ವಿರೋಧಿ ಕಾಯ್ದೆ ಇಲ್ಲ. ಸರ್ಕಾರ ರೈತರಿಗೆ ಹಿಂದಿಗಿಂತಲೂ ಎಂಎಸ್ ಪಿ ಹೆಚ್ಚು ನೀಡುತ್ತಿದೆ. ರೈತರ ಬೆಳೆದ ಬೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದು ಹೇಗೆ ರೈತ ವಿರೋಧಿ ನೀತಿ, ಇದು ರೈತ ಪರ ನೀತಿ. ಎಲ್ಲ ಕಾಯ್ದೆಗಳು ರೈತರ ಪರ ಇವೆ. ದುರುದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.
ಗಣೇಶೋತ್ಸವ ಷರತ್ತನ್ನು ಹಿಂದು ಪರ ಸಂಘಟನೆಗಳು ಉಲ್ಲಂಘನೆ ಮಾಡುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ ಮತ್ತು ಸಂಘ ಪರಿವಾರದವರು ಮಾತನಾಡುತ್ತಾರೆ. ಇದು ದೊಡ್ಡ ವಿಷಯ ಅಲ್ಲ. ಯಾರೂ ಸೆಡ್ಡು ಹೊಡೆಯುವ ಪ್ರಶ್ನೆಯೇ ಇಲ್ಲ. ಭಾರತೀಯರಾದ ನಾವು ಹಿಂದುಗಳು ಹಬ್ಬ ಮಾಡುತ್ತೇವೆ. ಗಣೇಶ ಹಬ್ಬಕ್ಕೆ ಐದು ದಿನ ಅವಕಾಶ ನೀಡಿದ್ದಾರೆ. ಇನ್ನೂ ನಾಲ್ಕು ದಿನ ಸಮಯ ಇದೆ. ಎಲ್ಲ ಸರಿ ಹೋಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.