ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭರತನಾಟ್ಯ ಕಲೆ ನಮ್ಮ ದೇಶದ ಸಾಹಿತ್ಯ, ಸಂಗೀತ, ಸಂಸ್ಕೃತಿಯ, ಪರಂಪರೆಯ ಜೀವಾಳವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಭವಾನಿ ಭರತನಾಟ್ಯ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ವೀರಗಂಗಾಧರ ಜಗದ್ಗುರುಗಳ ಕಲ್ಯಾಣ ಮಂಟಪದಲ್ಲಿ ನಡೆದ ನೃತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಸಂಸ್ಕೃತಿಯ ಪ್ರತೀಕವಾದ ಭರತನಾಟ್ಯ ಭಾರತೀಯ ಸಾಂಪ್ರದಾಯಿಕ ಶ್ರೇಷ್ಠ ನೃತ್ಯ ಕಲೆಯಾಗಿದೆ. ಇದು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ದೇವರು, ಧರ್ಮ, ಗುರುಹಿರಿಯರಲ್ಲಿ ವಿಧೇಯತೆ ಜತೆಗೆ ಮಾನಸಿಕ ದೈಹಿಕ ಆರೋಗ್ಯವನ್ನು ಬೆಳೆಸುತ್ತದೆ. ದೇಶದ ಸಂಪತ್ತಾದ ಮಕ್ಕಳಲ್ಲಿ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಕಾರ್ಯ ನಿರಂತರವಾಗಿರಲಿ ಎಂದರು.
ಮುಖ್ಯ ಅತಿಥಿಗಳಾಗಿದ್ದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾತನಾಡಿ, ಮಕ್ಕಳಿಗೆ ಓದು-ಬರಹದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಇತರೆ ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅವರಲ್ಲಿನ ಪ್ರತಿಭೆ, ಕೌಶಲ್ಯ ಗುರುತಿಸಿ ಪ್ರೋತ್ಸಾಹಿಸಬೇಕು. ತಂತ್ರಜ್ಞಾನದ ಪ್ರಭಾವದ ನಡುವೆಯೂ ಮಕ್ಕಳಿಗೆ ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಕಲೆ, ಸಂಗೀತ, ಸಾಹಿತ್ಯ, ಹಬ್ಬ, ಉತ್ಸವ, ಆಚರಣೆಗಳನ್ನು ಉಳಿಸಿ-ಬೆಳೆಸಿ-ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಭರತನಾಟ್ಯ ಶಾಲೆಯ ಮುಖ್ಯಸ್ಥರಾದ ವಿದುಷಿ ಡಾ. ಹೇಮಾ ವಾಘಮೋಡೆ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಉದ್ಯಮಿ ಬಸವೇಶ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ ಮಾತನಾಡಿದರು. ಮಹಾದೇವಪ್ಪ ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಕಾರ್ಯದರ್ಶಿ ಸರೋಜಾ ಗೌಡರ ಪ್ರಾಸ್ತಾವಿಕ ನುಡಿದರು. ಗಂಗಾಧರ ಮೆಣಸಿನಕಾಯಿ, ಮಂಜುನಾಥ ಕೊಕ್ಕರಗುಂದಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ವಿಶಾಲ ಬಟಗುರ್ಕಿ, ಜಗದೀಶ ಪಾಟೀಲ, ವೈಭವ ಗೋಗಿ, ಜಗದೀಶ ಆಚಾರ, ಪ್ರಭು ಬೋಮಲೆ ಸೇರಿ ಅನೇಕರಿದ್ದರು. ನವೀನ ಹಿರೇಮಠ, ರತ್ನಾ ಕುಂಬಾರ ನಿರೂಪಿಸಿದರು. ಬಳಿಕ ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ರೂಪಕ, ನಾಟ್ಯ ಸಂಭ್ರಮ ಮನ ಸೆಳೆಯಿತು.



