ಡಿಸೆಂಬರ್ 24ರಿಂದ ಆರಂಭವಾಗಲಿರುವ ವಿಜಯ ಹಜಾರೆ ಟ್ರೋಫಿ ಟೂರ್ನಿಗಾಗಿ ಮುಂಬೈ ಹಾಗೂ ದೆಹಲಿ ತಂಡಗಳನ್ನು ಪ್ರಕಟಿಸಲಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.
ವಿರಾಟ್ ಕೊಹ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಲಿದ್ದರೆ, ರೋಹಿತ್ ಶರ್ಮಾ ಮುಂಬೈ ಪರವಾಗಿ ಆಡಲಿದ್ದಾರೆ. ದೆಹಲಿ ತಂಡದ ನಾಯಕನಾಗಿ ರಿಷಭ್ ಪಂತ್ ಅವರನ್ನು ನೇಮಿಸಲಾಗಿದೆ. ಇತ್ತ ರೋಹಿತ್ ಶರ್ಮಾ ಸೇರಿರುವ ಮುಂಬೈ ತಂಡದ ನಾಯಕತ್ವವನ್ನು ಶಾರ್ದೂಲ್ ಠಾಕೂರ್ ವಹಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದು 2010ರಲ್ಲಿ. ಆ ಸಂದರ್ಭದಲ್ಲಿ ದೆಹಲಿ ಪರ ಐದು ಪಂದ್ಯಗಳಲ್ಲಿ ಕಣಕ್ಕಿಳಿದ ಅವರು, 45.80 ಸರಾಸರಿಯಲ್ಲಿ 229 ರನ್ ಗಳಿಸಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು.
ಇನ್ನೊಂದೆಡೆ, ರೋಹಿತ್ ಶರ್ಮಾ 2019ರಲ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಮುಂಬೈ ಪರ ಎರಡು ಪಂದ್ಯಗಳಲ್ಲಿ ಆಡಿದ ಅವರು ಒಟ್ಟು 50 ರನ್ ಗಳಿಸಿದ್ದರು. ಅದರ ನಂತರ ದೇಶೀಯ ಏಕದಿನ ಟೂರ್ನಿಯಲ್ಲಿ ಅವರು ಕಣಕ್ಕಿಳಿದಿರಲಿಲ್ಲ.
ಈಗ ವಿರಾಟ್ ಕೊಹ್ಲಿ ಸುಮಾರು 15 ವರ್ಷಗಳ ಬಳಿಕ ಹಾಗೂ ರೋಹಿತ್ ಶರ್ಮಾ 7 ವರ್ಷಗಳ ನಂತರ ವಿಜಯ ಹಝಾರೆ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಇಬ್ಬರೂ ದಿಗ್ಗಜರು ಎರಡು ಪಂದ್ಯಗಳಲ್ಲಿ ಭಾಗವಹಿಸಲಿದ್ದು, ನಂತರ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸಲಿದ್ದಾರೆ.
ವಿಜಯ ಹಜಾರೆ ಟೂರ್ನಿಗೆ ದೆಹಲಿ ತಂಡ: ರಿಷಭ್ ಪಂತ್, ವಿರಾಟ್ ಕೊಹ್ಲಿ (ಎರಡು ಪಂದ್ಯಗಳಿಗೆ), ಇಶಾಂತ್ ಶರ್ಮಾ, ನವದೀಪ್ ಸೈನಿ, ಆಯುಷ್ ಬದೋನಿ, ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ದಹಿಯಾ, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ್ ತ್ಯಾಗಿ, ಸಿಮರ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರ, ಆಯುಷ್ ದೋಸೆಜ, ವೈಭವ್ ಕಡ್ಪಲ್, ರೋಹನ್ ರಾಣಾ, ಅನೂಜ್ ರಾವತ್ (ಮೀಸಲು ಆಟಗಾರ).
ವಿಜಯ ಹಜಾರೆ ಟೂರ್ನಿಗೆ ಮುಂಬೈ ತಂಡ: ರೋಹಿತ್ ಶರ್ಮಾ (ಎರಡು ಪಂದ್ಯಗಳಿಗೆ), ಶಾರ್ದೂಲ್ ಠಾಕೂರ್ (ನಾಯಕ), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಇಶಾನ್ ಮುಲ್ಚಂದಾನಿ, ಶಮ್ಸ್ ಮುಲಾನಿ, ಮುಶೀರ್ ಖಾನ್, ತನುಷ್ ಕೋಟ್ಯಾನ್, ಅಂಗ್ಕ್ರಿಶ್ ರಘುವಂಶಿ, ತುಷಾರ್ ದೇಶಪಾಂಡೆ, ಸರ್ಫರಾಝ್ ಖಾನ್, ಓಂಕಾರ್ ತರ್ಮಲೆ, ಸಿದ್ದೇಶ್ ಲಾಡ್, ಸಿಲ್ವಸ್ಟರ್ ಡಿಸೋಝ, ಚಿನ್ಮಯ್ ಸುತಾರೆ, ಸಾಯಿರಾಜ್ ಪಾಟೀಲ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಸೂರ್ಯನಾಶ್ ಶೆಡ್ಗೆ.



