ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ 2025-2026ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಹಾತಲಗೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿಗಳಾದ ವಿ.ಎಸ್. ಠಕ್ಕೇಕರ ಹಾಗೂ ಸಿಬ್ಬಂದಿ ವರ್ಗದವರಿಂದ ಅಗ್ನಿ ಅವಘಡ ಮತ್ತು ಅವುಗಳ ತುರ್ತು ನಿರ್ವಹಣೆ ಕುರಿತು ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು. ಹಾತಲಗೇರಿ ಗ್ರಾಮದ ಅಸಂಖ್ಯಾತ ಜನರು, ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಮಾರಂಭದ ಸದುಪಯೋಗ ಪಡೆದರು.
ಸಾಯಂಕಾಲ ಗದಗಿನ ನ್ಯಾಯವಾದಿಗಳಾದ ಎಂ.ಜಿ. ಮುಲ್ಲಾ ಕಾನೂನು ಅರಿವು-ನೆರವು ವಿಷಯದ ಕುರಿತು ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಇರುವ ವಿವಿಧ ಕಾನೂನುಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಿ.ಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಣ್ಣ ಹೂವಣ್ಣವರ ಮಾತನಾಡಿ, ಶಿಬಿರದ ಉದ್ದೇಶಗಳನ್ನು ತಿಳಿಸಿದರು. ಜಾನಪದ ಕಲಾವಿದ ಶಿವಪ್ಪ ಡೊಳ್ಳಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ರಂಜಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಸದಸ್ಯರಾದ ಈರಪ್ಪ ಸತ್ಯಪ್ಪ ಬೇಲೇರಿ, ವಿಠ್ಠಲ ಬೆಂತೂರ, ಮಾಜಿ ಸೈನಿಕ ಅಜ್ಜಪ್ಪ ಅಬ್ಬಿಗೇರಿ, ಯುವ ಮುಖಂಡ ಸಂತೋಷ ಪೂಜಾರ, ಗೋವಿಂದಗೌಡ ಪಾಟೀಲ, ಪುರುಷೋತ್ತಮ ಪೂಜಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಆರ.ಎಸ್. ಹಿರೇಮಠ ಸ್ವಾಗತಿಸಿದರು. ಕುಮಾರ ನಾಗೇಶ ತಾಳಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಅಧಿಕಾರಿ ಪ್ರೊ. ಎಂ.ಬಿ. ಶಿರುಂದ ವಂದಿಸಿದರು.



