ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ದರ್ಶನ್ ಅಭಿಮಾನಿಗಳ ಆಕ್ರೋಶದ ನಡುವೆಯೇ, ಈ ಹೇಳಿಕೆಯ ಹಿಂದಿನ ನಿಜವಾದ ಉದ್ದೇಶವನ್ನು ಸುದೀಪ್ ಅವರ ಆಪ್ತ ರಾಜು ಗೌಡ ಬಹಿರಂಗಪಡಿಸಿದ್ದಾರೆ.
ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡುವಾಗ ಪೈರಸಿ ವಿರುದ್ಧದ ಆತಂಕವೇ ಪ್ರಮುಖ ಕಾರಣವಾಗಿತ್ತು ಎಂದು ರಾಜು ಗೌಡ ತಿಳಿಸಿದ್ದಾರೆ. “ಸುದೀಪ್ ಅವರಿಗೆ ಫೋನ್ ಮೂಲಕ ಈ ಬಾರಿ ಭಾರಿ ಪೈರಸಿ ಸಂಚು ರೂಪುಗೊಂಡಿದೆ ಎಂಬ ಮಾಹಿತಿ ಬಂದಿತ್ತು. ಸುದೀಪ್ ಅಭಿಮಾನಿಗಳ ಹೆಸರಲ್ಲಿ ನಕಲಿ ಸಂಘಗಳನ್ನು ಮಾಡಿ ಅಪಪ್ರಚಾರ ನಡೆಯುತ್ತಿದೆ. ಅದನ್ನು ತಡೆಯುವ ಸಲುವಾಗಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದಲೇ ಅವರು ಮಾತನಾಡಿದ್ದಾರೆ” ಎಂದು ಹೇಳಿದ್ದಾರೆ.
‘ನಾವೆಲ್ಲರೂ ಯುದ್ಧಕ್ಕೆ ಸಿದ್ಧ’ ಎಂಬ ಹೇಳಿಕೆ ಯಾವುದೇ ಸ್ಟಾರ್ ನಟರ ವಿರುದ್ಧವಲ್ಲ ಎಂದು ರಾಜು ಗೌಡ ಸ್ಪಷ್ಟಪಡಿಸಿದ್ದಾರೆ. “ಇಲ್ಲಿ ನಡೆಯುತ್ತಿರುವ ಚರ್ಚೆಯೇ ಬೇರೆ, ಸುದೀಪ್ ಅವರು ಹೇಳಿದ್ದು ಬೇರೆ. ಪೈರಸಿ ವಿರುದ್ಧದ ಹೋರಾಟದ ಬಗ್ಗೆ ಅವರು ಮಾತನಾಡಿದ್ದಾರೆ. ಯಾವುದೇ ಸಿನಿಮಾ ಅಥವಾ ನಟರ ವಿರುದ್ಧ ಹೇಳಿಕೆ ನೀಡಿಲ್ಲ” ಎಂದಿದ್ದಾರೆ.
ದರ್ಶನ್ ವಿರುದ್ಧ ಸುದೀಪ್ ಮಾತನಾಡಿದ್ದಾರೆ ಎನ್ನುವುದು ಸುಳ್ಳು ಎಂದು ರಾಜು ಗೌಡ ಹೇಳಿದ್ದಾರೆ. “ಅಂಥ ಸಂದರ್ಭವೇ ಇಲ್ಲ. ಯಾರಿಗೆ ತಟ್ಟಬೇಕೋ ತಟ್ಟುತ್ತೆ ಎಂಬ ಮಾತು ಪೈರಸಿ ಮಾಡುವವರಿಗಾಗಿ. ಪೈಲ್ವಾನ್ ಸಿನಿಮಾ ಸಮಯದಲ್ಲಿ ಪೈರಸಿ ನಿರ್ಮಾಪಕರನ್ನು ಕಣ್ಣೀರು ಹಾಕುವ ಸ್ಥಿತಿಗೆ ತಂದಿತ್ತು. ಅದರಿಂದ ಪಾಠ ಕಲಿಯಬೇಕು ಎಂಬುದೇ ಸುದೀಪ್ ಉದ್ದೇಶ” ಎಂದು ತಿಳಿಸಿದ್ದಾರೆ.
ಇನ್ನೂ ಸುದೀಪ್ ಅಭಿಮಾನಿಗಳ ಹೆಸರಲ್ಲಿ ಅಪಪ್ರಚಾರ ಮಾಡುವವರ ಬಗ್ಗೆ ರಾಜು ಗೌಡ ಕಿಡಿಕಾರಿದ್ದಾರೆ. “ಅಂಥವರು ಸುದೀಪ್ ಫ್ಯಾನ್ಸ್ ಅಲ್ಲ. ನಿಜವಾದ ಅಭಿಮಾನಿಗಳು ಸುಳ್ಳು ಸುದ್ದಿ ಹರಡುವುದಿಲ್ಲ. ಮಾಸ್ ಆಗಿ ಸುದೀಪಣ್ಣನ ಜೊತೆಗೆ ನಿಂತಿರುತ್ತಾರೆ. ಇಂಥವರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇವೆ” ಎಂದು ಹೇಳಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಜು ಗೌಡ, “ಅವರು ಸ್ಪಷ್ಟವಾಗಿ ಯಾರ ಹೆಸರನ್ನಾದರೂ ಹೇಳಿ ಮಾತನಾಡಿದ್ದರೆ ಉತ್ತರ ಕೊಡುತ್ತಾರೆ. ಪೈರಸಿ ಎಲ್ಲ ಸ್ಟಾರ್ ನಟರಿಗೂ ಸಮಸ್ಯೆ. ಹೀಗಾಗಿ ಅನಾವಶ್ಯಕವಾಗಿ ವಿವಾದ ಮಾಡಬಾರದು ಎಂಬುದೇ ಸುದೀಪ್ ಮಾತಿನ ಅರ್ಥ” ಎಂದು ತಿಳಿಸಿದ್ದಾರೆ.



