ಮೈಸೂರು: ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಭೂಗಳ್ಳರು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಎರಡು ಸಾವಿರ ರೂಪಾಯಿ ವೆಚ್ಚದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 30 ಕೋಟಿ ರೂಪಾಯಿ ಮೌಲ್ಯದ 22 ನಿವೇಶನಗಳನ್ನು ಜಿಪಿಎ ಮೂಲಕ ಬರೆಸಿಕೊಳ್ಳಲು ಖದೀಮರು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಘಟನೆ ಮೈಸೂರಿನ ಪಶ್ಚಿಮ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಡಿಸೆಂಬರ್ 23ರಂದು ನಡೆದಿದೆ. ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೇರ್ಗಳ್ಳಿ ಗ್ರಾಮ ಹಾಗೂ ಚಾಮುಂಡಿ ಸೂರು ನಗರ ಬಡಾವಣೆಯಲ್ಲಿ ಸಿದ್ದರಾಜು ಅವರಿಗೆ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು 22 ನಿವೇಶನಗಳಿವೆ ಎಂದು ತಿಳಿದುಬಂದಿದೆ.
ಖದೀಮರು ಸಿದ್ದರಾಜು ಅವರ ನಕಲಿ ಫೋಟೋ ಬಳಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಸೃಷ್ಟಿಸಿದ್ದರು. ಅಲ್ಲದೆ ಮನೆ ವಿಳಾಸ ಬದಲಿಸಿ ಬೋಗಾದಿ ಪಟ್ಟಣ ಪಂಚಾಯ್ತಿಯಿಂದ ಇ-ಖಾತಾ ಪಡೆದು, ಅದರ ಆಧಾರದ ಮೇಲೆ 22 ನಿವೇಶನಗಳನ್ನು ಜಿಪಿಎ ಮೂಲಕ ನೊಂದಣಿ ಮಾಡಿಸಲು ಮುಂದಾಗಿದ್ದರು.
ಡಿ.23ರಂದು ಉಪ ನೋಂದಣಾಧಿಕಾರಿ ಕಚೇರಿಗೆ ನಿವೇಶನ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದ ಕಚೇರಿ ಸಿಬ್ಬಂದಿಯೊಬ್ಬರು ಅನುಮಾನ ವ್ಯಕ್ತಪಡಿಸಿ, ಮಾಜಿ ಎಂಎಲ್ಸಿ ಸಿದ್ದರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪಡೆದ ಸಿದ್ದರಾಜು ಅವರು ಬೆಂಬಲಿಗರೊಂದಿಗೆ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಂತೆ,
ಭೂಗಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ನಿವೇಶನ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳ ವಿರುದ್ಧ ಸಿಸಿಟಿವಿ ದೃಶ್ಯಾವಳಿ ಹಾಗೂ ದಾಖಲೆಗಳ ಪ್ರತಿ ನೀಡುವಂತೆ ಸಿದ್ದರಾಜು ಮನವಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರಿಗೆ ದೂರು ನೀಡಲಾಗಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಸಿದ್ದರಾಜು ಒತ್ತಾಯಿಸಿದ್ದಾರೆ. ಘಟನೆ ಕುರಿತು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



