ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 20 ದಿನಗಳಲ್ಲಿ ಭಕ್ತರಿಂದ ಒಟ್ಟು 3.73 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು,
ಭಕ್ತರಿಂದ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಮಠದ ಪ್ರಕಟಣೆಯಂತೆ, ಕಳೆದ 20 ದಿನಗಳಲ್ಲಿ ಒಟ್ಟು 3,73,66,587 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಸಂಗ್ರಹವಾದ ಕಾಣಿಕೆಯಲ್ಲಿ 3,62,69,247 ರೂಪಾಯಿ ಕರೆನ್ಸಿ ನೋಟುಗಳ ರೂಪದಲ್ಲಿ ಲಭ್ಯವಾಗಿದ್ದು, 10,97,340 ರೂಪಾಯಿ ನಾಣ್ಯಗಳಾಗಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ತಿಳಿಸಿದೆ. ನಗದು ಜೊತೆಗೆ ಭಕ್ತರು 87 ಗ್ರಾಂ ಚಿನ್ನ ಮತ್ತು 910 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದಾರೆ.
ಭಕ್ತರ ಭಕ್ತಿ ಹಾಗೂ ನಂಬಿಕೆಗೆ ಇದೊಂದು ಸಾಕ್ಷಿಯಾಗಿದೆ. ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಭದ್ರತಾ ಕ್ರಮಗಳ ನಡುವೆ ಎಣಿಕೆ ಕಾರ್ಯ ಸಂಪೂರ್ಣಗೊಂಡಿದೆ.



