ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕನೇ ಅಂಗ ಎಂದೇ ಕರೆಯಲ್ಪಡುವ ಪತ್ರಿಕಾರಂಗವು ಥರ್ಡ್ ಅಂಪೈರ್ ಇದ್ದಂತೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಭಿಪ್ರಾಯಪಟ್ಟರು.
ಮಂಗಳವಾರ ಪತ್ರಿಕಾ ಭವನದಲ್ಲಿ `ಚಕ್ರವರ್ತಿ’ ಹೆಮ್ಮೆಯ ಕನ್ನಡ ದಿನ ಪತ್ರಿಕೆಯ 2026ರ ವರ್ಣರಂಜಿ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುವ ಶಕ್ತಿ ಪತ್ರಿಕಾರಂಗಕ್ಕೆ ಇರುವುದರಿಂದ ಇದು ಥರ್ಡ್ ಅಂಪೈರ್ ಆಗಿ ಕಾಣುತ್ತಿದೆ ಎಂದರು.
ಸರಕಾರದ ಯೋಜನೆಗಳು ಸಮರ್ಪಕವಾಗಿ ಜಾರಿ ಆಗುತ್ತದೆಯೋ ಇಲ್ಲವೋ ಎಂಬುದು ಅನುಭವಿಸುವ ವ್ಯಕ್ತಿಗಳಿಗೆ ತಿಳಿಯಬೇಕು. ಇಲ್ಲವೇ ಸ್ವತಂತ್ರವಾದ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಇರುವ ಪತ್ರಿಕಾರಂಗಕ್ಕೆ ತಿಳಿಯಬೇಕು. ಇದನ್ನು ಬಿಟ್ಟರೆ ಯಾರು ಕೂಡಾ ಸ್ಪಷ್ಟವಾಗಿ ತಿಳಿಯಲಾರರು. ನಿಖರವಾದ, ನೇರವಾದ ಸುದ್ದಿಗಳು ಬಂದರೆ ಅಂತಹ ಮಾಧ್ಯಮಗಳು ಜನರ ವಿಶ್ವಾಸ ಗಳಿಸಲು ಸಾಧ್ಯವಿದೆ. ಪತ್ರಿಕಾರಂಗ ಜವಾಬ್ದಾರಿಯನ್ನು ಅರಿತುಕೊಂಡಾಗ ಪತ್ರಿಕಾರಂಗದ ಆಶಯ ಈಡೇರಲು ಸಾಧ್ಯವೆಂದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಮಾತನಾಡಿ, ಮಾಧ್ಯಮರಂಗ ಕಲುಷಿತವಾಗಲು ಕಾರಣಗಳೇನು ಎಂಬುದನ್ನು ಅರಿತುಕೊಂಡು ಅವುಗಳಿಂದ ದೂರವಾದರೆ ಮಾಧ್ಯಮಗಳು ಎಲ್ಲರ ವಿಶ್ವಾಸ ಗಳಿಸಲು ಸಾಧ್ಯವಿದೆ ಎಂದರು.
ಗದಗ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಜಿಲ್ಲೆಯ ಮಾಧ್ಯಮಗಳ ಬೆಳವಣಿಗೆಯಲ್ಲಿ, ಸರಕಾರದ ಸೌಲಭ್ಯಗಳ ಸದುಪಯೋಗದಲ್ಲಿ ವಾರ್ತಾ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದರು.
ಸಮಾರಂಭದ ವೇದಿಕೆಯಲ್ಲಿದ್ದ ಹಿರಿಯ ಪತ್ರಕರ್ತ ಜಗದೀಶ್ ಕುಲಕರ್ಣಿ, ವಿಜಯಸಾಕ್ಷಿ ದಿನಪತ್ರಿಕೆ ಸಂಪಾದಕ ಎಚ್.ಎಂ. ಶರೀಫನವರ, ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಸಂಪಾದಕರ ಸಂಘದ ಅಧ್ಯಕ್ಷ ಜಗದೀಶ ಪೂಜಾರ, ಎ.ಬಿ.ಎಸ್.ಎಸ್.ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಈಶ್ವರಸಾ ಮೇರವಾಡೆ ಸಂದರ್ಭೋಚಿತವಾಗಿ ಮಾತನಾಡಿ ಚಕ್ರವರ್ತಿ ಪತ್ರಕೆಯ ಸಮಾಜಮುಖಿ ಸೇವೆಯನ್ನ ಶ್ಲಾಘಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸೊರಟೂರ ಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಪತ್ರಿಕಾರಂಗ ಮತ್ತು ಪತ್ರಕರ್ತರ ಬದುಕು ತಂತಿಯ ಮೇಲಿನ ನಡಿಗೆಯಾಗಿದೆ. ದಿನನಿತ್ಯ ಹಲವಾರು ಸವಾಲುಗಳನ್ನು ಎದುರುಸುತ್ತಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೆಯ ಸಂಪಾದಕ ಎನ್.ಆರ್. ಭಾಂಡಗೆ ಸರ್ವರ ಸಹಕಾರ ಸ್ಮರಿಸಿ ಅಭಿನಂದಿಸಿದರು. ವೇದಿಕೆ ಮೇಲೆ ಬೆಟಗೇರಿ ಎಸ್.ಎಸ್.ಕೆ ಪಂಚ್ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ್ ಕಬಾಡಿ, ಗದಗ ಎಸ್.ಎಸ್.ಕೆ ಪಂಚ್ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ ಉಪಸ್ಥಿತರಿದ್ದರು.
ಸುನೀಲ ಪ್ರಾರ್ಥಿಸಿದರು. ನ್ಯಾಯವಾದಿ, ಪತ್ರಿಕಾ ಕಾನೂನು ಸಲಹೆಗಾರ ಟಿ.ಎನ್. ಭಾಂಡಗೆ ಸ್ವಾಗತಿಸಿದರು. ರೈಜ್ ಆಫ್ ಗದಗ ಸಂಪಾದಕ ಆನಂದಯ್ಯ ವಿರಕ್ತಮಠ ನಿರೂಪಿಸಿದರು. ಆಸ್ಕ್ ನ್ಯೂಸ್ ಸಂಪಾದಕ ಡಾ. ಅನಂತ ಎಸ್. ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಮಾರಂಭದಲ್ಲಿ ಸಾಧಕರು, ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಮಾಧ್ಯಮಗಳ ಮಹತ್ವವನ್ನು ಎಲ್ಲರೂ ಅರ್ಥೈಸಿಕೊಳ್ಳುವ ಅಗತ್ಯವಿದೆ. ಪೊಲೀಸ್ ತನಿಖೆಯಲ್ಲಿ ಬಹಳಷ್ಟು ಸಹಕಾರಿಯಾಗಿ ನಿಲ್ಲುವ ಶಕ್ತಿ ಮಾಧ್ಯಮಗಳು. ಹೀಗಾಗಿ ಆಡಳಿತದ ಸುಧಾರಣೆಯಲ್ಲಿ, ಆಡಳಿತದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಶಕ್ತಿ ಮಾಧ್ಯಮಕ್ಕಿರುವುದರಿಂದ ಆಡಳಿತದ ಜೊತೆ ಮಾಧ್ಯಮಗಳು ಆತ್ಮೀಯ ಸಂಬಂಧ ಹೊಂದಿವೆ ಎಂದರು.



