ವಿಜಯಸಾಕ್ಷಿ ಸುದ್ದಿ, ಮುಳಗುಂದ: ಭೌತಿಕ ಸಂಪತ್ತಿಗಿಂತ ವಿದ್ಯಾ ಸಂಪತ್ತು ಬಹು ದೊಡ್ಡ ಆಸ್ತಿ ಎಂದು ನರೇಗಲ್ಲ ಎಸ್.ಎ. ಪಿಯು ಕಾಲೇಜಿನ ಉಪನ್ಯಾಸಕ ಎಫ್.ಎನ್. ಹುಡೆದ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಕಲಾಭವನದಲ್ಲಿ ಜರುಗಿದ ಎಸ್ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 2025/26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಳಗುಂದ ಪಟ್ಟಣ ಸಂತರು, ಶರಣರ ಪಾವನ ಕ್ಷೇತ್ರವಾಗಿದ್ದು, ಈ ಮಣ್ಣಿನಲ್ಲಿ ಶರಣ ಪರಂಪರೆಯಿದೆ. ಇಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾದ ಎಸ್ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನುರಿತ ಶಿಕ್ಷರನ್ನು ಒಳಗೊಂಡಿದ್ದು, ಲಿಲ್ಲಿ ಕಲಿತ ವಿದ್ಯಾರ್ಥಿಗಳು ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಪೋಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಲ್ಲಿ ನಾಡಿನ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಶಿವಾನಂದ ದಳವೆ ಮಾತನಾಡಿ, ಹೆತ್ತ ತಂದೆ-ತಾಯಿಗಳನ್ನು, ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ಗುರುಗಳು ಹೇಳುವ ಪಾಠಗಳನ್ನು ನಿತ್ಯ ಮನನ ಮಾಡಿಕೊಂಡಲ್ಲಿ ವಿದ್ಯಾ ಪ್ರಾಪ್ತಿಯಾಗುತ್ತದೆ ಎಂದರು.
ಎನ್.ಡಿ. ಬಟ್ಟೂರ ಮಾತನಾಡಿ, ನಮ್ಮ ಸಂಸ್ಥೆಗೆ 84 ವರ್ಷ ತುಂಬಿದ್ದು, ಇಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯ, ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಎಲ್ಲಾ ಮಕ್ಕಳು ಓದಿನ ಕಡೆ ಗಮನ ಹರಿಸಬೇಕು ಎಂದರು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಕ್ರೀಡಾಕೂಟದಲ್ಲಿ ಸಾಧನೆಗೈದ ಮಕ್ಕಳಿಗೆ ರವಿ ಚನ್ನಣ್ಣವರ ಹಾಗೂ ಮಾಹಾಂತೇಶ ನಪೂರಿಮಠ ಸ್ನೇಹ ಬಳಗ ನೀಡಿದ ದತ್ತಿ ಹಣವನ್ನು ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರೇಗಲ್ಲ ಎಸ್.ಎ. ಪಿ.ಯು ಕಾಲೇಜಿನ ಉಪನ್ಯಾಸಕ ಎಫ್.ಎನ್. ಹುಡೆದ ಪಾಲ್ಗೊಂಡಿದ್ದರು. ವಿ.ಎಸ್. ಕಲ್ಯಾಣಮಠ, ಎಚ್.ಎಂ. ಮಜ್ಜಿಗುಡ್ಡ, ಎ.ಎಂ. ಅಂಗಡಿ, ಇ.ಎಂ. ಗುಳೇದಗುಡ್ಡ, ಎಸ್.ಸಿ. ಕುರ್ತಕೋಟಿ, ಎಂ.ಎನ್. ಅದರಗುಂಚಿ, ಎಫ್.ಎಸ್. ಅಮೋಘಿಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಿ.ಎಸ್. ಗೌಳಿ, ಟಿ.ಎಂ. ಮಂಟೂರಮುಲ್ಲಾ, ಎನ್.ಎಂ. ನಾದಿಗಟ್ಟಿ, ಮಂಜುಳಾ ಬಳ್ಳಾರಿ ಮುಂತಾದವರಿದ್ದರು.



