ವಿಜಯಸಾಕ್ಷಿ ಸುದ್ದಿ, ಗದಗ: 20ನೇ ಶತಮಾನದ ಶ್ರೇಷ್ಠ ಸಾಹಿತಿ ಕುವೆಂಪು. ಯುಗದ ಕವಿಯಾಗಿ, ಜಗದ ಕವಿಯಾಗಿ ವಿಶ್ವಮಾನವ ದರ್ಶನವನ್ನು ತಮ್ಮ ಕೃತಿಗಳ ಮೂಲಕ ಮಾಡಿಸಿದ್ದಾರೆ. ಮನುಷ್ಯ ಜಾತಿ, ಧರ್ಮ, ಭಾಷೆ ಮತ್ತು ಗಡಿಗಳನ್ನು ಮೀರಿ ಬೆಳೆಯಬೇಕು. ಸಂಕುಚಿತ ಮನಸ್ಥಿತಿ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕುವೆಂಪು ಪ್ರತಿಪಾದಿಸಿರುವುದಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎಸ್.ಎಂ. ಕಾತರಕಿ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಜನ್ಮದಿನದ ನಿಮಿತ್ತ ಜರುಗಿದ ವಿಶ್ವಮಾನವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ಕುವೆಂಪು ಅವರ ಚಿಂತನೆಗಳು ವಿಶ್ವಮಾನವತ್ವ, ಸಮಾನತೆ ಮತ್ತು ಸಾಮಾಜಿಕ ಕ್ರಾಂತಿಯ ಮೇಲೆ ಕೇಂದ್ರೀಕೃತವಾಗಿವೆ. ಕರ್ನಾಟಕದ ಸಮಗ್ರತೆ, ಸರ್ವೋದಯದ ಕನಸನ್ನು ಕಂಡರು. ವೈಚಾರಿಕ ಕ್ರಾಂತಿಯ ಮೂಲಕ ಸಮಾಜವನ್ನು ಎಚ್ಚರಗೊಳಿಸುವುದು ತಮ್ಮ ಧರ್ಮವೆಂದು ನಂಬಿದ್ದರು. ನಕಾರಾತ್ಮಕವಾಗಿ ಬಿಂಬಿತವಾದ ಪಾತ್ರಗಳಲ್ಲಿಯ ಒಳ್ಳೆತನವನ್ನು ಎತ್ತಿ ತೋರಿ ಓದುಗನಲ್ಲಿ ಚಿಂತನೆಗಳನ್ನು ಬದಲಿಸಿದರು ಎಂದು ತಿಳಿಸಿದರು.
ನೀಲಮ್ಮ ಅಂಗಡಿ ಕುವೆಂಪು ವಿರಚಿತ ಗೀತೆಯನ್ನು ಹಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರು, ರತ್ನಕ್ಕ ಪಾಟೀಲ, ಜೆ.ಎ. ಪಾಟೀಲ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ವಿ.ಎಂ. ವೇರ್ಣೇಕರ, ಚಂದ್ರಕಲಾ ಇಟಗಿಮಠ, ರಾಜಶೇಖರ ದಾನರಡ್ಡಿ, ಅಮರೇಶ ರಾಂಪೂರ, ಡಿ.ಎಸ್. ಬಾಪುರಿ, ಎಸ್.ಯು. ಸಜ್ಜನಶೆಟ್ಟರ, ಕೆ.ಎಸ್. ಬಾಳಿಕಾಯಿ, ಎ.ಎಸ್. ಮಕಾನದಾರ, ಬಸವರಾಜ ಗಣಪ್ಪನವರ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಚನವೀರಪ್ಪ ದುಂದೂರ, ಎಸ್.ವಿ. ಯಂಡಿಗೇರಿ, ಬಿ.ಬಿ. ಹೊಳಗುಂದಿ, ಶಿಲ್ಪಾ ಮ್ಯಾಗೇರಿ, ಸತೀಶ ಕುಲಕರ್ಣಿ, ಜಯದೇವ ಮೆಣಸಗಿ, ಎ.ಸಿ. ಹಿರೇಮಠ, ಬಸವರಾಜ ನೆಲಜೇರಿ, ಮಂಜುಳಾ ವೆಂಕಟೇಶಯ್ಯ, ಎ.ಎಂ. ಅಂಗಡಿ, ವಿ. ಹರಿನಾಥಬಾಬು, ಅಕ್ಕಮ್ಮ ಪಾರ್ವತಿಮಠ, ಉಮಾ ಪಾರ್ವತಿಮಠ, ಸುಧಾ ಬಳ್ಳಿ, ಎಂ.ಎಫ್. ಡೋಣಿ, ಪ್ರ.ತೋ. ನಾರಾಯಣಪೂರ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮನುಜಮತವನ್ನು ಉತ್ತೇಜಿಸಿ, ಮೌಢ್ಯದಿಂದ ಮುಕ್ತವಾದ ಆಧ್ಯಾತ್ಮಿಕತೆಯನ್ನು ಪ್ರಚಾರ ಮಾಡಿದರು. ಭಾಷಾ ಸಾಂಸ್ಕೃತಿಕ ಐಕ್ಯತೆಯನ್ನು ಬೆಳೆಸಿ, ವಿಶ್ವಪಥದತ್ತ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದರು. ಸಾಹಿತ್ಯವನ್ನು ಸಾಮಾಜಿಕ ಕ್ರಾಂತಿಯ ಸಾಧನವನ್ನಾಗಿ ಮಾಡಿದರು ಎಂದು ತಿಳಿಸಿದರು.



